CHIKKANAYAKANAHALLI : ಅದ್ಯಾಕೋ ಅಧಿಕಾರಿಗಳಿಗೆ, ಇಲಾಖೆಗಳಿಗೆ ಗ್ರಾಮಗಳು ಅಂದ್ರೆ ಅಷ್ಟೊಂದು ನಿರ್ಲಕ್ಷ್ಯ. ಗ್ರಾಮ ಪಂಚಾಯಿತಿ ಗಳಿಗೆ ಪ್ರತಿ ವರ್ಷವೂ ಕೂಡ ವಿವಿಧ ಕಾಮಗಾರಿಗಳ ಅಭಿವೃದ್ಧಿಗಾಗಿ ಕೋಟ್ಯಾಂತರ ರೂಪಾಯಿ ಹಣ ಬಿಡುಗಡೆ ಆಗುತ್ತದೆ. ಆದ್ರೆ ಕೆಲವೊಂದು ಕಾಮಗಾರಿಗಳು ಸುಸೂತ್ರವಾಗಿ ನಡೆಯುತ್ತವೆ. ಮತ್ತೆ ಕೆಲವು ಅರ್ಧಕ್ಕೆ ನಿಂತು ಆ ಗ್ರಾಮಸ್ಥರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಗ್ರಾಮ ಅಂದ್ರೆ ರಸ್ತೆಗಳು ಕಿರಿದಾಗಿ ಇರುತ್ತವೆ. ಇದರ ಜೊತೆಯಲ್ಲಿ ರಸ್ತೆಯ ಅಕ್ಕಪಕ್ಕದಲ್ಲಿ ಗಿಡಗೆಂಟೆಗಳು ಬೆಳದು ರಸ್ತೆ ಸಂಚಾರಕ್ಕೆ ತೊಂದ್ರೆಯಾಗುತ್ತದೆ. ಜೊತೆಗೆ ಅಪಘಾತಗಳು ಕೂಡ ಸಂಭವಿಸುವ ಸಾಧ್ಯತೆ ಇರುತ್ತದೆ. ಆದ್ರೆ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಇತ್ತ ಗಮನಹರಿಸೊಲ್ಲ. ಇಂತಹದ್ದೆ ಒಂದು ಸಮಸ್ಯೆ ಈಗ ಹುಳಿಯಾರಿನ ಗ್ರಾಮವೊಂದರಲ್ಲಿ ಗ್ರಾಮಸ್ಥರಿಗೆ ದೊಡ್ಡ ತಲೆನೋವಾಗಿದೆ.
ಹೌದು, ಹುಳಿಯಾರು ಹೋಬಳಿಯ ದಸೂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಾಠಿ ಪಾಳ್ಯದಿಂದ ದಪ್ಪಕುಂಟೆ ಮಾರ್ಗದವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಸೀಮೆ ಜಾಲಿ ಗಿಡಗಳು ವಿಪರೀತವಾಗಿ ಬೆಳೆದಿದ್ದು, ಇದರ ಪರಿಣಾಮವಾಗಿ ವಾಹನ ಚಾಲಕರಿಗೆ ಹಾಗೂ ಪಾದಚಾರಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಒಂದು ಕಡೆಯಿಂದ ಗಾಡಿಗಳು ಒಮ್ಮೆಲೆ ಹೋದ್ರೆ ಮತ್ತೊಂದು ಕಡೆಯಿಂದ ಬರುವಂತ ವಾಹನಗಳಾಗಲಿ, ಪಾದಚಾರಿಗಳಾಗಲಿ ಮುಂದೆ ಹೋಗುವುದು ಕಷ್ಟಕರವಾಗಿದೆ. ಪ್ರತಿನಿತ್ಯವೂ ಕೂಡ ಗ್ರಾಮಸ್ಥರು ಇಲ್ಲಿ ಸಂಚರಿಸಲು ಕಷ್ಟಪಡುತ್ತಿದ್ದಾರೆ.
ಇನ್ನು ಈ ರಸ್ತೆಯಲ್ಲಿ ಪ್ರತಿದಿನ ಸಾವಿರಾರು ಪ್ರಯಾಣಿಕರು, ಶಾಲಾ ಮಕ್ಕಳ ಸಂಚರಿಸುತ್ತಾರೆ. ರಸ್ತೆಯ ಪಕ್ಕದಲ್ಲಿ ಜಾರಿಗಿಡಗಳು ಬೆಳೆದಿದ್ದು, ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಯಾವಾಗ ಬೇಕಾದರೂ ಪ್ರಾಣಾಪಾಯ ಸಂಭವಿಸಬಹುದು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಸಮಸ್ಯೆ ಸಂಬಂಧ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಇಂದಿನವರೆಗೆ ಯಾವುದೇ ಕ್ರಮಕೈಗೊಂಡಿಲ್ಲ ಎನ್ನುತ್ತಾರೆ.
ಈ ಗ್ರಾಮದಲ್ಲಿ ಒಂದು ಕಡೆ ರಸ್ತೆ ಕಿರಿದಾಗಿದ್ರೆ, ಮತ್ತೊಂದು ಕಡೆ ಜಾಲಿಗಿಡಗಳು ಬೆಳೆದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಗ್ರಾಮಸ್ಥರ ಸಮಸ್ಯೆಯನ್ನು ಆಲಿಸಬೇಕಿದೆ. ಜೊತೆಯಲ್ಲಿ ರಸ್ತೆಯ ಅಕ್ಕಪಕ್ಕದಲ್ಲಿ ಬೆಳೆದಿರುವ ಜಾರಿಗಿಡಗಳನ್ನು ಕತ್ತರಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿಕೊಡಬೇಕಿದೆ.