ತುಮಕೂರು : ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಡಿಸಿ ಕಚೇರಿ ಎದುರು ಪ್ರತಿಭಟನೆ

ತುಮಕೂರು : ಇತ್ತೀಚೆಗೆ ದಲಿತರ ಮೇಲೆ ಕೊಲೆ, ದೌರ್ಜನ್ಯ, ಅಸ್ಪೃಶ್ಯತಾ ಆಚರಣೆ, ಕೌಂಟರ್ ಕೇಸ್ ಮರ್ಯಾದೆ ತಡೆಯಲು ರಾಜ್ಯ ಸರ್ಕಾರ ಕ್ರಮವಹಿಸಲು ಒತ್ತಾಯಿಸಿ ತುಮಕೂರಿನ ಡಿಸಿ ಕಚೇರಿಯ ಮುಂಭಾಗ ದಲಿತ ಹಕ್ಕುಗಳ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.

ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ದಲಿತ ಜಯಕುಮಾರ್ ಸಜೀವ ದಹನ, ಕೊಲೆ ಪ್ರಕರಣ ಹಾಗೂ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕು ಕವಣದಲ ದೇವಾಲಯ ಪ್ರವೇಶ ನಿರಾಕರಣೆ, ತುಮಕೂರು ಪಂಚಾಯತ್ ರಾಜ್ ಇಲಾಖೆಯಲ್ಲಿ ದಲಿತ ಸಿಬ್ಬಂದಿ ಓಂಕಾರ ಮೂರ್ತಿ ಮೇಲೆ ಜಾತಿ ನಿಂದನೆ. ಹೀಗೆ ಹತ್ತು ಹಲವು ಪ್ರಕರಣಗಳನ್ನು ಖಂಡಿಸಿದರು. ಇದೇ ವೇಳೆ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆ ವೈಫಲ್ಯವಾಗಿದೆ ಹಾಗೂ ಸರ್ಕಾರವು ಕೂಡ ದಲಿತರನ್ನು ಕಡೆಗಣಿಸುತ್ತಿದೆ ಎಂದು ದಲಿತ ಹಕ್ಕುಗಳ ಸಮಿತಿ ಪ್ರತಿಭಟನೆ ನಡೆಸಿದರು.

ಇದೇ ವೇಳೆ ದಲಿತ ಮುಖಂಡ ಗೋಪಾಲಕೃಷ್ಣ ಮಾತನಾಡಿ, ರಾಜ್ಯ ಸರ್ಕಾರ ದಿನೇದಿನೇ ದಲಿತರನ್ನು ಕಡೆಗಣಿಸುತ್ತಿದೆ. ದಲಿತರ ಮೇಲೆ ದೌರ್ಜನ್ಯ ಆಗ್ತಾ ಇದ್ದರೂ ಕೂಡ ಸರ್ಕಾರ ಕಣ್ಣು ಮುಚ್ಚಿ ಕುಳಿತಿದ್ದು , ಈ ಸರ್ಕಾರ ದಲಿತರ ವಿರೋಧಿ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಇನ್ನು ನಮ್ಮ ಪೊಲೀಸ್ ಇಲಾಖೆಯು ದಲಿತರ ಮೇಲಿನ ದೌರ್ಜನಗಳನ್ನು ತಪ್ಪಿಸುವಲ್ಲಿ ವಿಫಲವಾಗಿದೆ. ಗೃಹ ಸಚಿವರು ನಮ್ಮ ಜಿಲ್ಲೆಯವರೇ ಆಗಿದ್ದರೂ ಕೂಡ ಅವರ ಜಿಲ್ಲೆಯಲ್ಲಿ ಈ ರೀತಿ ಪ್ರಕರಣಗಳು ನಡೀತಾ ಇರೋದು ಬೇಸರದ ಸಂಗತಿ ಎಂದರು.

ಇನ್ನು ಜಿಲ್ಲಾ ಸಂಚಾಲಕ ರಾಜು ವೆಂಕಟಪ್ಪ ಮಾತನಾಡಿ, ಸರ್ಕಾರವು ದಲಿತರ ಮೇಲೆ ಮಾಡುತ್ತಿರುವ ದೌರ್ಜನ್ಯವನ್ನು ಈ ಕೂಡಲೇ ನಿಲ್ಲಿಸಬೇಕು. ದಲಿತರ ಮೇಲೆ ದೌರ್ಜನ್ಯ ಆಗಿದೆ ಎಂದು ದೂರು ನೀಡಲು ಹೋದರೆ ಪೊಲೀಸರು ತೆಗೆದುಕೊಳ್ಳುತ್ತಿಲ್ಲ. ಆದಷ್ಟು ಬೇಗ ಸರ್ಕಾರ ನಮಗೆ ನ್ಯಾಯ ಒದಗಿಸಬೇಕಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ನಡೆದಿರುವ ಪ್ರಕರಣಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಂಡು, ಕಾನೂನು ಕ್ರಮ ಜರುಗಿಸಿ. ಆರೋಪಿಗಳನ್ನು ಬಂಧಿಸುವಂತೆ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

Author:

...
Sushmitha N

Copy Editor

prajashakthi tv

share
No Reviews