BANGALORE : ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇತ್ತೀಚೆಗೆ ನಡೆದ ಕಾಲ್ತುಳಿತದ ನಂತರ ಇದೀಗ RCB ಯ ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಸೋಸಲೆ ಬಂಧನ ವಿವಾದದ ಕೇಂದ್ರಬಿಂದುವಾಗಿದೆ. ಈಗ ಅವರ ಪತ್ನಿ ಮಾಳವಿಕಾ ನಾಯ್ಕ್ ಸರ್ಕಾರದ ವಿರುದ್ಧವೇ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಮಾಳವಿಕಾ ನಾಯ್ಕ್ ಅವರು ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ, ತಮ್ಮ ಪತಿ ನಿಖಿಲ್ ಸೋಸಲೆ ಯಾವುದೇ ತಪ್ಪು ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬೆಳಿಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಂಧನವು ಸರ್ಕಾರದ ವೈಫಲ್ಯವನ್ನು ಮರೆಮಾಡಲು ಮಾಡಲಾದ ರಾಜಕೀಯ ನಾಟಕ ಎಂದು ಗುಡುಗಿದ್ದಾರೆ. “ನಾವು 2 ವರ್ಷದ ಮಗುವಿನೊಂದಿಗೆ ಪ್ರಯಾಣಿಸುತ್ತಿದ್ದಾಗ, ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ನನ್ನ ಪತಿಯನ್ನು ಬಂಧಿಸಿದರು. ಯಾವುದೇ ತನಿಖೆಯಿಲ್ಲದೆ, ಕೇವಲ ಸಿಎಂ ಆದೇಶದ ಆಧಾರದಲ್ಲಿ ನನ್ನ ಪತಿಯ ಬಂಧನ ನಡೆದಿದೆ.
ಅವರು ತಮ್ಮ ಅರ್ಜಿಯಲ್ಲಿ ಈ ಕಾರ್ಯಕ್ರಮಕ್ಕೆ ಆನ್ಲೈನ್ ಉಚಿತ ಪಾಸ್ ವ್ಯವಸ್ಥೆ ಇತ್ತು, ಪಾಸ್ ಹೊಂದಿದವರಿಗೆ ಮಾತ್ರ ಪ್ರವೇಶ ನೀಡಲಾಗಿತ್ತು. ಆದರೆ ದುರಂತದ ಹೊಣೆ ಮಾತ್ರ ಆರ್ಸಿಬಿ ಅಧಿಕಾರಿಗಳ ಮೆರೆ ಹಾಕಲಾಗಿದೆ. ಅರ್ಜಿಯಲ್ಲಿ ಮತ್ತೊಂದು ಮಹತ್ವದ ಅಂಶವಿದೆ. ಡಿಸಿಎಂ ಸ್ವತಃ ಆಟಗಾರರನ್ನು ವಿಮಾನ ನಿಲ್ದಾಣಕ್ಕೆ ಸ್ವಾಗತಕ್ಕೆ ಹೋದರು, ವಿಧಾನಸೌಧದಲ್ಲಿ ಸನ್ಮಾನವಾಯಿತು, ನಂತರ ಸ್ಟೇಡಿಯಂ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಹೀಗಿರುವಾಗ ಏಕೆ ಆರ್ಸಿಬಿಯ ಮೇಲೆ ಮಾತ್ರ ಹೊಣೆಹಾಕುವುದು ಎಂಬುದಾಗಿ ಮಾಳವಿಕಾ ಪ್ರಶ್ನಿಸಿದ್ದಾರೆ.
ಮಾಳವಿಕಾ ನಾಯ್ಕ್, ನಿಖಿಲ್ ಸೋಸಲೆ ಬಂಧನವನ್ನು ಕಾನೂನುಬಾಹಿರವೆಂದು ಘೋಷಿಸಬೇಕು ಮತ್ತು ತಕ್ಷಣ ಬಿಡುಗಡೆ ಮಾಡುವಂತೆ ಹೈಕೋರ್ಟ್ನಲ್ಲಿ ಕೋರಿ ಅರ್ಜಿ ಸಲ್ಲಿಸಿದ್ದಾರೆ.