ತುಮಕೂರು :
ಇಂದು ಜಗತ್ತಿನಾದ್ಯಂತ ಮುಸ್ಲಿಮರ ಪವಿತ್ರ ಹಬ್ಬವಾದ ರಂಜಾನ್ ಸಂಭ್ರಮ. ಪವಿತ್ರ ರಂಜಾನ್ ಮಾಸದಲ್ಲಿ ಒಂದು ತಿಂಗಳು ಪೂರ್ತಿ ಉಪವಾಸ ಆಚರಿಸಿದ್ದ ಮುಸ್ಲಿಂ ಬಾಂಧವರು, ಇವತ್ತು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸುವ ಮೂಲಕ ಅಲ್ಲಾಹುವಿನ ಕೃಪೆಗೆ ಪಾತ್ರರಾದರು.
ತುಮಕೂರಿನಲ್ಲಿಯೂ ಕೂಡ ಇವತ್ತು ರಂಜಾನ್ ಹಬ್ಬದ ಸಂಭ್ರಮ, ಸಡಗರ ಮನೆ ಮಾಡಿತ್ತು. ನಗರದ ಈದ್ಗಾ ಮೈದಾನದಲ್ಲಿ ಸೇರಿದ ಸಾವಿರಾರು ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಪರಸ್ಪರ ಆಲಿಂಗಿಸಿ ಹಬ್ಬದ ಶುಬಾಶಯಗಳನ್ನು ಹಂಚಿಕೊಂಡರು. ಬಳಿಕ ಹಬ್ಬದ ಸಂದೇಶಗಳನ್ನ ತಿಳಿಸಿದರು. ಇದೇ ವೇಳೆ ಯುಗಾದಿಯ ಶುಭಾಶಯಗಳನ್ನು ಕೂಡ ಕೋರಿದರು.
ರಂಜಾನ್ ಹಬ್ಬವು ಸಹೋದರತೆಯ ಚೈತನ್ಯವನ್ನು ಹೆಚ್ಚಿಸುವ ಹಬ್ಬವಾಗಿದ್ದು, ದಾನ, ಕರುಣೆಯನ್ನು ಅಳವಡಿಸಿಕೊಳ್ಳುವ ಸಂದೇಶವನ್ನು ನೀಡುತ್ತದೆ. ಭಾರತೀಯರಾದ ನಾವೆಲ್ಲಾ ಒಂದೇ. ಹೀಗಾಗಿ ಸಹೋದರರಂತೆ ನಾವೆಲ್ಲಾ ಅಣ್ಣ ತಮ್ಮಂದಿರಂತೆ ಯುಗಾದಿ ಮತ್ತು ರಂಜಾನ್ ಆಚರಿಸಿದ್ದೇವೆ ಎಂದರು.
ಗೃಹ ಸಚಿವ ಡಾ.ಜಿ.ಪರಮೇಶ್ವರ್, ಮಾಜಿ ಶಾಸಕರಾದ ಷಫೀ ಅಹಮದ್, ರಫೀಕ್ ಅಹಮದ್, ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹಮದ್, ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಲ್ಲಾ ಪಂಚಾಯತ್ ಸಿಇಓ ಜಿ.ಪ್ರಭು, ತುಮಕೂರು ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜಾ, ತುಮಕೂರು ಎಸ್ಪಿ ಅಶೋಕ್ ವೆಂಕಟ್ ಸೇರಿದಂತೆ ಹಲವರು ಸಾಮೂಹಿಕ ಪ್ರಾರ್ಥನೆ ವೇಳೆ ಭಾಗಿಯಾಗಿ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಭಾಶಯಗಳನ್ನು ತಿಳಿಸಿದರು. ಇನ್ನು ಇದೇ ವೇಳೆ ಗಣ್ಯರಿಗೆ ಮುಸ್ಲಿಂ ಬಾಂಧವರು ಸನ್ಮಾನ ಮಾಡಿದರು.
ಒಟ್ಟಿನಲ್ಲಿ ಮುಸ್ಲಿಮರ ಪವಿತ್ರ ಹಬ್ಬವಾದ ರಂಜಾನ್ ಆಚರಣೆ ತುಮಕೂರಿನಲ್ಲಿ ಜೋರಾಗಿತ್ತು. ಸಾಮೂಹಿಕ ಪ್ರಾರ್ಥನೆಯ ಬಳಿಕ ತಮ್ಮತಮ್ಮ ಮನೆಗಳಿಗೆ ತೆರಳಿ ತರತರಹದ ಸಿಹಿಯನ್ನು ಸವಿದು ಖುಷಿಪಟ್ಟರು.