TUMAKURU: ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಕುರಿತು ನಡೆಯುತ್ತಿರುವ ಬೃಹತ್ ಚರ್ಚೆಯ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ಅವರು ಇಂದು ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದ ಸುಂಕಾಪುರದಲ್ಲಿ ಹೇಮಾವತಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಬಳಿಕ ರೈತರ ಜೊತೆ ಸಭೆ ನಡೆಸಿದರು.
ಸಭೆಯಲ್ಲಿ ತುಮಕೂರು ಜಿಲ್ಲೆಯ ರೈತರಿಗೆ ಭರವಸೆ ನೀಡಿ ಮಾತನಾಡಿದರು. “ನಮ್ಮ ಜಿಲ್ಲೆಯ ರೈತರ ಹಕ್ಕನ್ನು ಯಾರೂ ಕಿತ್ತುಕೊಳ್ಳಬಾರದು. ಇನ್ನೊಬ್ಬರನ್ನು ಸಂತೈಸಲು ನಮ್ಮ ರೈತರಿಗೆ ಮೋಸ ಮಾಡಬಾರದು,” ಎಂದು ಖಡಕ್ ಆಗಿ ಎಚ್ಚರಿಸಿದರು.
"ಈ ಯೋಜನೆಯ ಕುರಿತು ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಸ್ಪಷ್ಟವಾಗಿ ಎಲ್ಲ ಮಾಹಿತಿ ನೀಡಿದ್ದೇನೆ. ನನ್ನ ಜಿಲ್ಲೆಗೆ ಒಂದಿಷ್ಟೂ ಮೋಸ ಆಗಲು ಬಿಡಲ್ಲ. ರೈತರ ಕೂಗು ಈಗಾಗಲೇ ವಿಧಾನಸೌಧಕ್ಕೆ ತಲುಪಿದೆ. ಅವರು ನೀರು ಕಸಿಯುವ ಪರಿಸ್ಥಿತಿ ಬರುವುದಿಲ್ಲ."
"ಈ ವಿಚಾರವಾಗಿ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರೊಂದಿಗೆ ಕೂಡ ಮಾತುಕತೆ ನಡೆಸಿದ್ದೇನೆ. ಜೊತೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ‘ಆತುರಪಡಬೇಡಿ, ಅನ್ಯಾಯ ಮಾಡಬೇಡಿ’ ಎಂದು ನೇರವಾಗಿ ಫೋನಿನಲ್ಲಿ ಹೇಳಿದ್ದೇನೆ."
“ಸೂರ್ಯ ಪೂರ್ವದಲ್ಲಿ ಹುಟ್ಟುತ್ತಾನೆ, ಪಶ್ಚಿಮದಲ್ಲಿ ಅಲ್ಲ. ಯಾರೂ ಹೆದರಬೇಡಿ,” ಎಂಬ ಆಳಾರ್ಥವಿರುವ ಮಾತುಗಳ ಮೂಲಕ ಯೋಜನೆಯನ್ನು ಸ್ಥಗಿತಗೊಳಿಸಲು ತಾವು ಸೂಚನೆ ನೀಡಿರುವುದನ್ನು ಪರೋಕ್ಷವಾಗಿ ಸ್ಪಷ್ಟಪಡಿಸಿದರು.