ಬೆಂಗಳೂರು : ಮೈಸೂರು ಸ್ಯಾಂಡಲ್ ಸೋಪ್ಗೆ ರಾಯಭಾರಿಯಾಗಲು ಕನ್ನಡ ಮೂಲದ ನಟಿಯರನ್ನು ಸಂಪರ್ಕಿಸಲಾಗಿತ್ತು ಆದರೆ ಅವರು ಲಭ್ಯವಿಲ್ಲದ ಹಿನ್ನೆಲೆಯಲ್ಲಿ ತಮನ್ನಾ ಭಾಟಿಯಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಸ್ಪಷ್ಟಪಡಿಸಿದರು.
ಬೆಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಾಯಭಾರಿ ಆಯ್ಕೆ ಮಾಡಲು ಒಂದು ಸಮಿತಿ ರಚಿಸಲಾಗಿತ್ತು. ಮೊದಲು ಕನ್ನಡದ ತಾರೆಯರನ್ನೇ ಸಂಪರ್ಕಿಸಿದ್ದೇವೆ. ಆದರೆ ಯಾವುದೇ ನಟಿಯರು ಲಭ್ಯವಿರಲಿಲ್ಲ. ರಶ್ಮಿಕಾ ಮಂದಣ್ಣ ಅವರಿಗೆ ಕೇಳಿದಾಗ ಅವರು ಬೇರೆ ಸಂಸ್ಥೆಯೊಂದರಲ್ಲಿ ಸೈನ್ ಮಾಡಿರುವುದರಿಂದ ಸಾಧ್ಯವಿಲ್ಲ ಎಂದರು. ಶ್ರೀಲೀಲಾ, ಪೂಜಾ ಹೆಗಡೆ ಹಾಗೂ ಕಿಯಾರಾ ಅಡ್ವಾಣಿಯವರನ್ನೂ ಸಂಪರ್ಕಿಸಿದ್ದೆವು, ಅವರಿಗೂ ಬೇರೆ ಯೋಜನೆಗಳು ಇದ್ದವು, ಎಂದು ವಿವರಿಸಿದರು.
ಇನ್ನು ದೀಪಿಕಾ ಪಡುಕೋಣೆ ಅವರ ಹೆಸರು ಪ್ರಸ್ತಾಪವಾದರೂ, ಅವರು ಬಜೆಟ್ಗೆ ತಕ್ಕವರಲ್ಲದ ಕಾರಣ ಅವರನ್ನು ಸಂಪರ್ಕಿಸಿರಲಿಲ್ಲ ಎಂಬುದನ್ನೂ ಪಾಟೀಲ್ ಸ್ಪಷ್ಟಪಡಿಸಿದರು. ಇನ್ನು ಯಾರೇ ರಾಯಭಾರಿ ಆದರೂ 2 ವರ್ಷ ಲಾಕ್ ಆಗ್ತಾರೆ. ಇದರಲ್ಲಿ ಕನ್ನಡಕ್ಕೆ ಅವಮಾನ ಮಾಡಬೇಕು ಎಂಬ ಉದ್ದೇಶ ಇಲ್ಲ. ಇದು ಬಿಸಿನೆಸ್, ಸ್ಪರ್ಧೆ ಜಾಸ್ತಿ. ಕನ್ನಡದ ಅಸ್ಮಿತೆ, ಕನ್ನಡದ ಕಲಾವಿದರ ಬಗ್ಗೆ ಬದ್ಧತೆ, ಗೌರವ ಇದೆ. ಯಾರೂ ವಿವಾದ ಮಾಡಬಾರದು. ನಮ್ಮದು ಪ್ಯಾನ್ ಇಂಡಿಯಾ ಬಿಸಿನೆಸ್, ಈಗ ವಿದೇಶಕ್ಕೂ ಬಿಸಿನೆಸ್ ಒಯ್ಯಬೇಕೆಂಬ ಯೋಜನೆ ಇದೆ ಎಂದು ವಿವರಿಸಿದರು.
ಇನ್ನು ಕೆಲ ಕನ್ನಡಪರ ಸಂಘಟನೆಗಳು ತಮನ್ನಾ ಭಾಟಿಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.