ಮೈಸೂರು : ಹಸುಗಳನ್ನು ಮೇಯಿಸಲು ಹೋಗಿದ್ದ ವ್ಯಕ್ತಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಸಾವನ್ನಪ್ಪಿದರೆ, ಇತ್ತ ಎರಡು ಹಸುಗಳು ಕೂಡ ದುರ್ಘಟನೆಯಲ್ಲಿ ಹಸುನೀಗಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಏಚಗಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು 52 ವರ್ಷದ ಸಿದ್ದರಾಜು ಎನ್ನಲಾಗಿದೆ. ಇವರ ಜೊತೆ ಸಾವನ್ನಪ್ಪಿದ ಹಸುಗಳು ಸುಮಾರು ಒಂದೂವರೆ ಲಕ್ಷ ಬೆಲೆ ಬಾಳುತ್ತಿದ್ದವು ಎನ್ನಲಾಗಿದೆ. ಇನ್ನು ಸಿದ್ದರಾಜುರವರು ಜಮೀನಿನಲ್ಲಿ ತಮ್ಮ ಹಸುಗಳನ್ನು ಮೇಯಿಸುತ್ತಿರುವಾಗ, ಹಸುಗಳು ವಿದ್ಯುತ್ ತಂತಿಯನ್ನು ಸ್ಪರ್ಶಿಸಿದೆ. ಈ ವೇಳೆ ಹಸುಗಳನ್ನು ಕಾಪಾಡಲು ಹೋದಾಗ ಹಸುವಿನ ಮಾಲಿಕ ಸಿದ್ದರಾಜು ಸಹ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾನೆ. ತುಂತುರು ಮಳೆಯಾಗುತ್ತಿದ್ದು, ಸಂಜೆಯಾದರೂ ಸಿದ್ದರಾಜು ಅವರು ಮನೆಗೆ ಬಾರದ ಹಿನ್ನೆಲೆ ಆತನ ಕುಟುಂಬ ಸಂಜೆ ಸಮಯದಲ್ಲಿ ತಮ್ಮ ಜಮೀನಿಗೆ ಹೋಗಿ ನೋಡಿದಾಗ ವಿದ್ಯುತ್ ತಂತಿ ತುಂಡಾಗಿ ಬಿದ್ದಿರುವುದು ಹಾಗೂ ಸಿದ್ದರಾಜು ಮತ್ತು ಆತನ ಎರಡು ಹಸುಗಳು ಸಹ ಮೃತಪಟ್ಟಿರುವುದು ಕಂಡುಬಂದಿದೆ.
ಇನ್ನು ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು, ಕೆಇಬಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.