ಮಧುಗಿರಿ : ಮಧುಗಿರಿ ಹೇಮಾವತಿ ಎಕ್ಸ್ ಪ್ರೆಸ್ ಪೈಪ್ ಲೈನ್ ಲಿಂಕ್ ಕೆನಾಲ್ ವಿರೋಧಿಸಿ ಮೇ 31 ಶನಿವಾರ ಬೆಳಗ್ಗೆ 10 ಗಂಟೆಗೆ ಗುಬ್ಬಿ ತಾಲೂಕು ಸುಂಕಾಪುರ ಗ್ರಾಮದಿಂದ ಬೃಹತ್ ಪ್ರತಿಭಟನೆ ಚಳುವಳಿ ಹಮ್ಮಿಕೊಂಡಿದ್ದು, ಮಧುಗಿರಿ ತಾಲೂಕಿನಿಂದ ಪಕ್ಷಾತೀತವಾಗಿ 500ಕ್ಕೂ ಹೆಚ್ಚು ಮಂದಿ ಆಗಮಿಸುವ ನಿರೀಕ್ಷೆ ಇದೆ ಎಂದು ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಶಂಕರಪ್ಪ ತಿಳಿಸಿದರು.
ಮಧುಗಿರಿ ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಇಬ್ಬರು ಸಚಿವರುಗಳು ನೀರಾವರಿ ಹೋರಾಟದಲ್ಲಿ ಭಾಗವಹಿಸುತ್ತಿಲ್ಲ, ಜೊತೆಯಲ್ಲಿ ಕಾಮಗಾರಿ ನಿಲ್ಲಿಸದಿದ್ದರೆ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ. ಅಂದು 5000 ಸಾವಿರಕ್ಕೂ ಹೆಚ್ಚು ರೈತರು, ಕಾಲುವೆಗೆ ಮುತ್ತಿಗೆ ಹಾಕಿ ಜೆಸಿಬಿ ಮೂಲಕ ಕಾಲುವೆಯನ್ನು ಮುಚ್ಚುವ ಕೆಲಸ ಮಾಡಲಾಗುವುದು ಎಂದರು.
ತಾಲೂಕು ಬಿಜೆಪಿ ಅಧ್ಯಕ್ಷ ಹನುಮಂತರೆಡ್ಡಿ ಮಾತನಾಡಿ, ಮಾಗಡಿ ಲಿಂಕ್ ಕೆನಾಲ್ ವಿಚಾರದಲ್ಲಿ ಡಿಕೆ ಶಿವಕುಮಾರ್ ಹಟಕ್ಕೆ ಬಿದ್ದಿದ್ದಾರೆ. ಇಬ್ಬರು ಸಚಿವರು ಜಾಣ್ಮೆ ನಡೆ ಅನುಸರಿಸುತ್ತಿದ್ದಾರೆ. ಇದೇ ರೀತಿ ಮುಂದುವರೆದರೆ ರೈತರ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬರುತ್ತದೆ. ರೈತ ಸಂಘದ ಹೋರಾಟಕ್ಕೆ ತಾಲೂಕು ಬಿಜೆಪಿ ಸಂಪೂರ್ಣ ಬೆಂಬಲ ನೀಡುತ್ತದೆ ಎಂದರು.
ಈ ಸಂದರ್ಭದಲ್ಲಿ ದೊಡ್ಡಮಾಳಯ್ಯ, ನಾಗರಾಜು, ಭಾಗ್ಯಮ್ಮ, ನಾಗರತ್ನಮ್ಮ, ರಮೇಶ್, ಜಯರಾಮ್, ಮತ್ತಿತ್ತರರು ಹಾಜರಿದ್ದರು.