ದಕ್ಷಿಣ ಕನ್ನಡ : ಬೆಳ್ತಂಗಡಿ ತಾಲೂಕಿನಾದ್ಯಂತ ನಿರಂತರ ಮಳೆ; ವ್ಯಾಪಕ ಹಾನಿ

RAIN EFFECT : ಕಳೆದ ಎರಡು ದಿನಗಳಿಂದ ದಕಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಾದ್ಯಂತ ಸುರಿದ ಭಾರೀ ಮಳೆಯಿಂದ ಹಲವು ಗ್ರಾಮಗಳಲ್ಲಿ ಗುಡ್ಡ ಕುಸಿತಗಳು ಸಂಭವಿಸಿ ವ್ಯಾಪಕ ಹಾನಿ ಉಂಟಾಗಿದೆ. ನೆನ್ನೆಯಿಂದ ಇಂದು ಬೆಳಿಗ್ಗೆಯವರೆಗೆ ನಿರಂತರವಾಗಿ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಗುಡ್ಡ ಕುಸಿತ, ಮನೆಗಳಿಗೆ ಹಾನಿ ಹಾಗೂ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಇಳಂತಿಲ ಗ್ರಾಮದಲ್ಲಿ ಸಿದ್ದಿಕ್ ಎಂಬವರ ಮನೆಯ ಹಿಂದಿನ ಗುಡ್ಡ ಕುಸಿದು ಬಿದ್ದಿದೆ. ಮನೆಗೆ ಮಣ್ಣು ಹಾಗೂ ನೀರು ನುಗ್ಗಿದ್ದು ಅಪಾರ ಹಾನಿ ಸಂಭವಿಸಿದೆ. ಮನೆಯವರನ್ನು ತಕ್ಷಣ ಸ್ಥಳಾಂತರಿಸಲಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನು ಬಂದಾರು ಗ್ರಾಮದಲ್ಲಿಯ ಶಿವನಗರ ಪೆರ್ಲಬೈಪಾಡಿ ರಸ್ತೆಯ ಬೋಲೋಡಿ ಎಂಬಲ್ಲಿ ಗುಡ್ಡ ಕುಸಿದು ರಸ್ತೆ ಸಂಪೂರ್ಣ ಬಂದ್ ಆಗಿದೆ. ಇದೇ ಸ್ಥಳದಲ್ಲಿ ಕಳೆದ ಮಳೆಗಾಲದಲ್ಲಿಯೂ ಇಂತಹ ಘಟನೆ ನಡೆದಿತ್ತು. ಈ ಬಾರಿ ಕೂಡ ಭಾರೀ ಮಣ್ಣು ರಸ್ತೆ ಮೇಲೆ ಬೀಳಲಾಗಿದೆ.

ಮುರ್ತಾಜೆ ಗ್ರಾಮದಲ್ಲಿ ಸೇಸಪ್ಪ ಪೂಜಾರಿ ಎಂಬವರ ಕೋಳಿ ಶೆಡ್‌ ಮೇಲೆ ಗುಡ್ಡ ಕುಸಿದು ಬಿದ್ದು ಅಷ್ಟಿಷ್ಟಲ್ಲದ ನಷ್ಟ ಉಂಟಾಗಿದೆ. ಸ್ಥಳೀಯರು ಶೆಡ್‌ನಿಂದ ಪಶುಪಾಲನೆ ಸಾಮಗ್ರಿಗಳನ್ನು ಹೊರತೆಗೆದು ರಕ್ಷಿಸಿದ್ದಾರೆ.

ಇಳಂತಿಲದ ಹಾರೆಕೆರೆ ಪ್ರದೇಶ, ಲಾಯಿಲ ಅಂಕಾಜೆ, ಬಾರ್ಯ ಗ್ರಾಮ, ನಡ ನೆಕ್ಕರೆ ಸೇರಿದಂತೆ ಹಲವು ಕಡೆಗಳಲ್ಲಿ ಗುಡ್ಡ ಕುಸಿತದಿಂದ ರಸ್ತೆ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ. ನಡ ಗ್ರಾಮದಲ್ಲಿ ವಿಶ್ವನಾಥ ಗೌಡ ಅವರ ಮನೆ ಪಕ್ಕದ ಗುಡ್ಡ ಕುಸಿದಿದ್ದು, ಮನೆಗೆ ಹಾನಿಯಾಗಿದೆ.

ಇನ್ನು ಬಾರ್ಯ ಗ್ರಾಮದ ಅಶ್ರಫ್ ಎಂಬವರ ಮನೆಗೂ ಗುಡ್ಡ ಕುಸಿದು ಬಿದ್ದಿದ್ದು ತೀವ್ರ ಹಾನಿಯಾಗಿದೆ. ಆದರೆ ಇಂದು ಬೆಳಿಗ್ಗೆಯಿಂದ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಜನರು ತಾತ್ಕಾಲಿಕವಾಗಿ ನಿಟ್ಟುಸಿರು ಬಿಡುತ್ತಿರುವಂತಾಗಿದೆ. ಕೂಡಲೇ ಸ್ಥಳೀಯ ಆಡಳಿತ ಹಾಗೂ ತುರ್ತುಸೇವಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. 

Author:

...
Keerthana J

Copy Editor

prajashakthi tv

share
No Reviews