TUMAKURU NEWS : ಬಾಲಕಾರ್ಮಿಕ ಪದ್ದತಿ ಒಂದು ದೊಡ್ಡ ಪಿಡುಗಾಗಿದೆ. ಬಾಲಕಾರ್ಮಿಕ ಪದ್ದತಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರಗಳು ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತಿವೆ. ಆದರೂ, ಈ ಅನಿಷ್ಠ ಪದ್ಧತಿಯನ್ನು ತಡೆಯಲು ಸಾಧ್ಯವಾಗ್ತಿಲ್ಲ. ಇತ್ತ ಶೈಕ್ಷಣಿಕ ಜಿಲ್ಲೆ ತುಮಕೂರಿನಲ್ಲಿ ದಿನೇ ದಿನೇ ಬಾಲಕಾರ್ಮಿಕರನ್ನು ಹಲವು ಕೆಲಸಗಳಿಗೆ ಬಳಸಿಕೊಳ್ಳುವಂತಹ ಪ್ರಕರಣಗಳು ಕಂಡುಬರುತ್ತಿವೆ. ಈ ಕಾರಣಕ್ಕೆ ಡಿಸಿ ಶುಭಾ ಕಲ್ಯಾಣ್ ಕಾರ್ಮಿಕ ಇಲಾಖೆಯ ಅಧಿಕಾರಿ ತೇಜಾವತಿ ಅವರಿಗೆ ಖಡಕ್ ಎಚ್ಚರಿಕೆಯನ್ನು ನೀಡಿದ್ರು. ಕೂಡಲೇ ತುಮಕೂರು ಜಿಲ್ಲೆಯಲ್ಲಿ ಬಾಲಕಾರ್ಮಿಕರನ್ನು ಕೆಲಸಕ್ಕೆ ಬಳಸಿಕೊಳ್ಳುತ್ತಿರುವುದನ್ನು ತಡೆಗಟ್ಟಬೇಕು ಅಂತ ಸೂಚಿಸಿದ್ರು. ಅದರಂತೆ ತುಮಕೂರಿನ ಗುಬ್ಬಿಗೇಟ್, ರಿಂಗ್ ರೋಡ್ನಲ್ಲಿ ಬಾಲಕರನ್ನು ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರೆ ಅನ್ನೋ ಖಚಿತ ಮಾಹಿತಿಯ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ರು.
ಡಿಸಿ ಆದೇಶದಂತೆ ಕಾರ್ಯಪ್ರೌವೃತ್ತರಾದ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ್ ಕಮಿಟಿ ಸದಸ್ಯರು ಗಳೊಂದಿಗೆ ಖಚಿತ ಮಾಹಿತಿಯ ಮೇರೆಗೆ ಇಂದು ಗುಬ್ಬಿಗೇಟ್ ಮತ್ತು ರಿಂಗ್ ರೋಡ್ನಲ್ಲಿ ಗ್ಯಾರೇಜ್ಗಳ ಮೇಲೆ ದಾಳಿ ನಡಸಿದ್ರು. ಈ ವೇಳೆ ಗ್ಯಾರೇಜ್ನಲ್ಲಿ ಕೆಲಸಕ್ಕೆಂದು ಇರಿಸಿಕೊಂಡಿದ್ದ ಮಹಮ್ಮದ್ ಮಾಸ್ ಮತ್ತು ನಿರಜ್ ಕುಮಾರ್ ಬೋಟಿ ಎಂಬ ಇಬ್ಬರು ಬಾಲಕಾರ್ಮಿಕರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ವೇಳೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸ ಹಾಗೂ ತುಮಕೂರು ತಾಲೂಕು ಕಾರ್ಯ ನಿರ್ವಾಹಕ ಅಧಿಕಾರಿ ಹರ್ಷ, ಕಾರ್ಮಿಕ ಅಧಿಕಾರಿ ಕೆ. ತೇಜಾವತಿ ಹಾಗೂ ಅಧಿಕಾರಿಗಳು ಹಾಜರಿದ್ರು.