ತುಮಕೂರು:
ತುಮಕೂರಿನ ಕಾಲ್ಟೆಕ್ಸ್ ವೃತ್ತದಲ್ಲಿ ಮೊನ್ನೆ ಅಪಘಾತವೊಂದು ನಡೆದಿತ್ತು. ಕುಣಿಗಲ್ ಕಡೆಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ಚ ಮತ್ತು ಆಟೋ ನಡುವೆ ಡಿಕ್ಕಿಯಾಗಿತ್ತು. ಈ ವೇಳೆ ಬಸ್ ಚಾಲಕ ಮತ್ತು ಆಟೋ ಚಾಲಕನ ನಡುವೆ ವಾಗ್ವಾದ ನಡೆದಿತ್ತು. ಈ ಬಗ್ಗೆ ಮಾಹಿತಿ ಬಂದ ತಕ್ಷಣವೇ ನಿಮ್ಮ ಪ್ರಜಾಶಕ್ತಿ ತಂಡ ಸ್ಥಳಕ್ಕೆ ಧಾವಿಸಿತ್ತು. ಬಸ್ ಚಾಲಕನ ಬಳಿ ತೆರಳಿ ಘಟನೆಯ ಬಗ್ಗೆ ಮಾಹಿತಿ ಪಡೆಯಲು ನಮ್ಮ ವರದಿಗಾರ ಮುಂದಾಗಿದ್ರು. ಈ ವೇಳೆ ಅಪಘಾತಕ್ಕೆ ಆಟೋ ಚಾಲಕನೇ ಕಾರಣ ಅಂದಿದ್ದ ಬಸ್ ಡ್ರೈವರ್, ನಂತರ ಬಸ್ನಲ್ಲಿ ಬ್ರೇಕೇ ಇಲ್ಲ ಎಂದಿದ್ದ. ಅಲ್ಲಪ್ಪಾ, ಬಸ್ಸಲ್ಲಿ ಬ್ರೇಕ್ ಇಲ್ಲ ಅಂದ್ಮೇಲೆ ಅದನ್ನ ರಸ್ತೆಗ್ಯಾಕೆ ಇಳಿಸಿದೆ. ಸರ್ಕಾರಿ ಬಸ್ನಲ್ಲಿ ಪ್ರಯಾಣಿಸುವ ಪ್ರಯಾಣಿಕರ ಜೀವಕ್ಕೆ ಬೆಲೆ ಇಲ್ವಾ ಅಂತಾ ಕೇಳಿದ್ರೆ, ನನ್ನ ಜೀವಕ್ಕೇ ಬೆಲೆಯಿಲ್ಲ, ಇನ್ನು ಪ್ರಯಾಣಿಕರ ಜೀವ ಕಟ್ಕೊಂಡು ನಾನೇನ್ ಮಾಡ್ಲಿ ಅಂತಾ ಬೇಜವಾಬ್ದಾರಿಯ ಮಾತುಗಳನ್ನಾಡಿದ್ದ. ಈ ಬಗ್ಗೆ ನಿಮ್ಮ ಪ್ರಜಾಶಕ್ತಿ ಟಿವಿಯಲ್ಲಿ ತುಮಕೂರಿಗರೇ ಹುಷಾರ್! ಬಸ್ ರೂಪದಲ್ಲಿ ಬರ್ತಾನೆ ಯಮ ಅನ್ನೋ ಶೀರ್ಷಿಕೆಯ ಅಡಿಯಲ್ಲಿ ವರದಿ ಮಾಡಿತ್ತು. ಇದೀಗ ಈ ಹೊರಗುತ್ತಿಗೆ ಚಾಲಕನ ವಿರುದ್ಧ ಸಂಸ್ಥೆ ಕ್ರಮಕೈಗೊಂಡಿದೆ.
ನಿನ್ನೆ ನಮ್ಮಲ್ಲಿ ಸುದ್ದಿ ಬಿತ್ತರವಾದ ಬಳಿಕ ಹಲವರು ಇದರಲ್ಲಿ ಚಾಲಕನದ್ದೇನು ತಪ್ಪಿಲ್ಲ. ನೀವು ಡಿಪೋ ಮ್ಯಾನೇಜರ್ ಅವ್ರನ್ನ ಪ್ರಶ್ನಿಸಿ ಅಂತಾ ಕಾಮೆಂಟ್ಗಳನ್ನ ಹಾಕಿದ್ರು. ಹೀಗಾಗಿ ಇವತ್ತು ನಾವು ಖುದ್ದು ಕೆಎಸ್ಆರ್ಟಿಸಿ ತುಮಕೂರು ವಿಭಾಗ ನಿಯಂತ್ರಣಾಧಿಕಾರಿಯನ್ನೇ ಭೇಟಿ ಮಾಡಿ ಈ ಬಗ್ಗೆ ಪ್ರಶ್ನೆ ಮಾಡುವ ಕೆಲಸವನ್ನ ಮಾಡಿದ್ವಿ. ಈ ವೇಳೆ ಈ ಚಾಲಕ ಹೇಳಿದ್ದು ಸುಳ್ಳು ಅನ್ನೋ ವಿಚಾರ ಬಯಲಾಗಿದೆ.
ಅಸಲಿಗೆ ಈ ಬಸ್ನಲ್ಲಿ ಯಾವುದೇ ತೊಂದರೆಯಿರಲಿಲ್ವಂತೆ. ಆದ್ರೆ ಚಾಲಕ ಅಪಘಾತವಾದ ಬಳಿಕ ತನ್ನ ತಪ್ಪನ್ನ ಮರೆಮಾಚಲು ಬಸ್ನಲ್ಲಿ ಬ್ರೇಕೇ ಇಲ್ಲ ಅಂತಾ ಹೇಳಿದ್ದಾನಂತೆ. ಡಿಪೋದಲ್ಲಿ ಪ್ರತೀ ಬಸ್ ಗೂ ಲಾಗ್ ಶೀಟ್ಗಳನ್ನ ಇರಿಸಲಾಗಿದೆಯಂತೆ. ಬಸ್ನಲ್ಲಿ ಯಾವುದೇ ತೊಂದರೆ ಇದ್ರೂ ಈ ಶೀಟ್ನಲ್ಲಿ ಬರೆಯಬೇಕು. ಆದ್ರೆ ಕಳೆದ ಒಂದು ತಿಂಗಳಿನಿಂದ ಈ ಬಸ್ನಲ್ಲಿ ಯಾವುದೇ ತೊಂದರೆ ಇಲ್ವಂತೆ. ನಿನ್ನೆ ಈ ಸುದ್ದಿ ಬಿತ್ತರವಾದ ಬಳಿಕವೂ ಅಧಿಕಾರಿಗಳು ಬಸ್ನ ಬ್ರೇಕ್ ಸರಿಯಿದೆಯೋ ಇಲ್ವೋ ಅನ್ನೋದನ್ನ ಪರಿಶೀಲನೆ ನಡೆಸಿದ್ದಾರಂತೆ. ಆದ್ರೆ ಎಲ್ಲವೂ ಸರಿಯಿದ್ರೂ ಕೂಡ ಚಾಲಕ ಸುಳ್ಳು ಹೇಳಿದ್ದಾನೆ. ತಾನು ತಪ್ಪಿಸಿಕೊಳ್ಳಲು ಸಂಸ್ಥೆಯ ಹೆಸರಿಗೆ ಕಳಂಕ ತರುವ ಕೆಲಸ ಮಾಡಿದ್ದಾನಂತೆ. ಹೀಗಾಗಿ ಆತನ ವಿರುದ್ಧ ಕ್ರಮ ಕೈಗೊಂಡಿರುವುದಾಗಿ ತುಮಕೂರು ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್ ತಿಳಿಸಿದ್ದಾರೆ.
ಇನ್ನು ಈತನನ್ನ ವಿಸ್ಡಮ್ ಅನ್ನೋ ಹೆಸರಿನ ಏಜೆನ್ಸಿಯಿಂದ ಹೊರಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ಸೇರಿಸಿಕೊಳ್ಳಲಾಗಿತ್ತಂತೆ. ಸರಿಯಾದ ತರಬೇತಿ ನೀಡಿಯೇ ಕೆಲಸಕ್ಕೆ ನೇಮಕ ಮಾಡಿಕೊಳ್ಳಲಾಗಿತ್ತಂತೆ. ಆದ್ರೆ ಈತ ಹೀಗೆ ಸುಳ್ಳು ಹೇಳುವ ಮೂಲಕ ಸಂಸ್ಥೆಯ ಘನತೆಗೆ ಧಕ್ಕೆ ತಂದಿದ್ದಾನೆ. ಯಾವುದೇ ಚಾಲಕ ಬಸ್ ಕಂಡಿಷನ್ನಲ್ಲಿ ಇಲ್ಲ ಅಂದ್ರೆ ರಸ್ತೆಗೆ ಇಳಿಸಲೇಬಾರದು. ಅಂತಹ ಅನಿವಾರ್ಯತೆಯೂ ನಮ್ಮಲ್ಲಿಲ್ಲ. ಹೀಗಿರುವಾಗ ಸಂಸ್ಥೆಯ ಬಗ್ಗೆ ಜನರಲ್ಲಿ ತಪ್ಪು ಸಂದೇಶ ಹೋಗುವಂತೆ ಮಾಡಿದ ಚಾಲಕ ಕಿರಣ್ನನ್ನ ಕೆಲಸದಿಂದಲೇ ತೆಗೆದುಹಾಕಿದ್ದೇವೆ. ವಿಸ್ಡಮ್ ಏಜೆನ್ಸಿಗೂ ನೋಟೀಸ್ ನೀಡುತ್ತಿದ್ದೇವೆ ಅಂತಾ ಕೆಎಸ್ಆರ್ಟಿಸಿ ಡಿಸಿ ಮಾಹಿತಿ ನೀಡಿದ್ದಾರೆ.
ಸಾರಿಗೆ ಬಸ್ ಚಾಲಕನಿಗೆ ಸಾಕಷ್ಟು ಜವಾಬ್ದಾರಿಯಿರುತ್ತೆ. ನೂರಾರು ಜನರ ಪ್ರಾಣ ಆತನ ಕೈಯಲ್ಲಿರುತ್ತೆ. ಹೀಗಿರುವಾಗ ಈ ರೀತಿ ಬೇಜವಾಬ್ದಾರಿತನದಿಂದ ನಡೆದುಕೊಳ್ಳೋದು ಎಷ್ಟು ಸರಿ. ಈ ವೃತ್ತಿ ಕಷ್ಟವಾಗ್ತಿದ್ರೆ ಬೇರೆ ಕೆಲಸ ನೋಡಿಕೊಳ್ಳಲಿ, ಅದು ಬಿಟ್ಟು ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡೋದು ಮಾತ್ರ ಸರಿಯಲ್ಲ.