ಕೊರಟಗೆರೆ:
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ, ಪಂಚಾಯತ್ ರಾಜ್ ಇಂಜಿನಿಯರ್ ಉಪವಿಭಾಗದ ಅಧಿಕಾರಿಗಳೇ ನಾವು ನಿಮ್ಮ ಕಚೇರಿಗೆ ಅಲೆದು ಅಲೆದು ಸಾಕಾಗಿದೆ. ಈಗ ನೀವು ಒಮ್ಮೆ ನಮ್ಮೂರಿಗೆ ಬನ್ನಿ ನಮ್ಮ ಕಷ್ಟ ಏನು ಅಂತಾ ಗೊತ್ತಾಗುತ್ತೆ ಅಂತಾ ಕೊರಟಗೆರೆ ತಾಲೂಕು ಕೋಳಾಲ ಹೋಬಳಿಯ ಕೊರಟಗೆರೆ ಕ್ಷೇತ್ರ ಮತ್ತು ತುಮಕೂರು ಗ್ರಾಮಾಂತರ ಕ್ಷೇತ್ರದ ನಡುವೆ ಇರುವ ಮಲುಗೋನಹಳ್ಳಿ ಗ್ರಾಮಸ್ಥರು ನೋವಿನಿಂದ ಹೇಳ್ತಾ ಇದ್ದಾರೆ. ಹೌದು ಸೀತಕಲ್ಲು ಸಂಪರ್ಕಿಸುವ ಒಂದು ಕಿಲೋ ಮೀಟರ್ ತುಮಕೂರು ಗ್ರಾಮಾಂತರಕ್ಕೆ ಸೇರುತ್ತೆ, ಮಲಗೋನಗಳ್ಳಿ ಸಂಪರ್ಕದ ಒಂದು ಕಿಲೋ ಮೀಟರ್ ಕೊರಟಗೆರೆ ಕ್ಷೇತ್ರಕ್ಕೆ ಸೇರುತ್ತೆ. ಹೀಗಾಗಿ ಇಲ್ಲಿನವರು ಅಭಿವೃದ್ಧಿಯನ್ನೇ ಕಂಡಿಲ್ಲ.
ಮಲುಗೋನಹಳ್ಳಿಯಲ್ಲಿ ಒಂದಲ್ಲಾ ಎರಡಲ್ಲಾ ಸಾಲು ಸಮಸ್ಯೆಗಳೇ ಕೂಡಿವೆ. ಶುದ್ದ ಕುಡಿಯುವ ನೀರಿನ ಘಟಕ ಏನೋ ಇದೆ. ಆದರೆ ನೀರೇ ಬರೋದಿಲ್ಲ. ಗ್ರಾಮದಲ್ಲಿ 40ಕ್ಕೂ ಅಧಿಕ ಮನೆಗಳಿವೆ, ಆದರೆ ಇಲ್ಲಿ ಸಿಸಿರಸ್ತೆ, ಚರಂಡಿಗಳಂಥೂ ಇಲ್ವೇ ಇಲ್ಲ. ಸೀತಕಲ್ಲಿಗೆ ಸಂಪರ್ಕ ಕಲ್ಪಿಸುವ ಜಿಲ್ಲಾ ಪಂಚಾಯ್ತಿಗೆ ಸೇರಿದ ರಸ್ತೆಯಲ್ಲಿ ನೂರಾರು ಗುಂಡಿಗಳು ಬಿದ್ದಿದ್ದು, ಅಪಘಾತಕ್ಕೆ ಆಹ್ವಾನ ನೀಡುತ್ತಿವೆ. ನಿತ್ಯ ಈ ರಸ್ತೆಯಲ್ಲಿ ಬಿದ್ದು ಕೈ ಕಾಲು ಮುರಿದುಕೊಂಡು ಹೋಗುವ ಪರಿಸ್ಥಿತಿ ಇದೆ.
ಮಲಗೋನಹಳ್ಳಿ ಗ್ರಾಮದಲ್ಲಿ ಗೃಹಸಚಿವ ಡಾ.ಜಿ.ಪರಮೇಶ್ವರ ಅವರ ಆದೇಶದ ಮೇರೆಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಿಸಲಾಗಿದೆ. ಆದರೆ ನಿರ್ವಹಣೆಯ ಕೊರತೆಯಿಂದಾಗಿ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ನಿಂತಿದ್ದು ಬೀಗ ಜಡಿಯಲಾಗಿದೆ. ಇದಲ್ಲದೇ ಶುದ್ದ ಕುಡಿಯುವ ನೀರಿನ ಘಟಕದ ಮೋಟಾರ್ ಸೇರಿದಂತೆ ಬೆಲೆಬಾಳುವ ವಸ್ತುಗಳು ಕಳ್ಳತನ ಆದರೂ ಇಲ್ಲಿಯವರೆಗೂ ಸ್ಥಳೀಯ ಗ್ರಾಮ ಪಂಚಾಯ್ತಿಯಾಗಲಿ ಅಥವಾ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಎಇಇ ಆಗಲಿ ಇಲ್ಲಿವರೆಗೂ ದೂರು ನೀಡಿಲ್ಲ. ಯಾರದ್ದು ದುಡ್ಡು ಯಲ್ಲಮ್ಮ ಜಾತ್ರೆ ಅನ್ನೋತರ ಅಧಿಕಾರಿಗಳ ಅಸಡ್ಡೆಯ ವರ್ತನೆ ತೋರುತ್ತಿದ್ದಾರೆ. ಇದರಿಂದ ಇಲ್ಲಿನ ಜನರು ಫ್ಲೋರೆಡ್ ಯುಕ್ತ ನೀರನ್ನೇ ಕುಡಿದು ಬದುಕಬೇಕಿದೆ.
ಜಿಲ್ಲೆಗೆ ಸಮೀಪವಿರುವ ಹಳ್ಳಿಗಳ ಸ್ಥಿತಿಯೇ ಹೀಗಾದರೆ, ಇನ್ನು ಕುಗ್ರಾಮಗಳ ಸ್ಥಿತಿ ಹೇಗಿರಬಹುದು..? ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಕೂಡಲೇ ಗ್ರಾಮದ ಜನರಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸಿ ಕೊಡಬೇಕಿದೆ.