ಸೋನು ನಿಗಮ್ :
ಪ್ರಸಿದ್ಧ ಗಾಯಕ ಸೋನು ನಿಗಮ್ಗೆ ಸಂಗೀತ ಕಾರ್ಯಕ್ರಮದಲ್ಲಿ ಕನ್ನಡಿಗರನ್ನು ಪಹಲ್ಗಾಮ್ ದಾಳಿಗೆ ಹೋಲಿಕೆ ಮಾಡಿ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದ ಪ್ರಕರಣ ಸಂಬಂಧ ಹೈಕೋರ್ಟ್ ನಿಂದ ಬಿಗ್ ರಿಲೀಫ್ ಸಿಕ್ಕಿದೆ. ನ್ಯಾಯಾಲಯವು ತಾತ್ಕಾಲಿಕವಾಗಿ ಅವರಿಗೆ ಬಂಧನದಿಂದ ರಕ್ಷಣೆ ನೀಡಿದೆ. ಆದರೆ, ಇದಕ್ಕೆ ಪೋಷಕವಾಗಿ ನಿಗಮ್ಗೆ ಕಠಿಣ ಸೂಚನೆ ಕೂಡ ನೀಡಲಾಗಿದೆ.
ಗಾಯಕ ಸೋನು ನಿಗಂ ತಮ್ಮ ಮೇಲಿನ ಎಫ್ಐಆರ್ ರದ್ದು ಮಾಡುವಂತೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಇಂದು ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಮುಂದಿನ ವಿಚಾರಣೆಯ ದಿನಾಂಕದವರೆಗೆ ಗಾಯಕ ಸೋನು ನಿಗಮ್ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ನಿರ್ದೇಶಿಸಿದೆ. ಇನ್ನು ಹೈಕೋರ್ಟ್ ಸ್ಪಷ್ಟವಾಗಿ ತಿಳಿಸಿರುವುದು ಏನೆಂದರೆ – "ಪ್ರಭಾವಿ ವ್ಯಕ್ತಿಗಳು, ಸಾರ್ವಜನಿಕ ವೇದಿಕೆಗಳಲ್ಲಿ ಹೇಳಿಕೆ ನೀಡುವಾಗ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಇದು ಕೇವಲ ಅಭಿಪ್ರಾಯವಲ್ಲ, ಸಾಮಾಜಿಕ ಪ್ರಭಾವದ ಪ್ರಶ್ನೆಯೂ ಹೌದು" ಎಂದು ಗಮನಾರ್ಹವಾಗಿ ಹೇಳಿದೆ.
ಈ ವಿವಾದವು ಒಂದು ಸಂಗೀತ ಕಾರ್ಯಕ್ರಮದ ಸಂದರ್ಭದಲ್ಲಿ ಸಂಭವಿಸಿದ ಹೇಳಿಕೆಯ ಕುರಿತು ಆಗಿದ್ದು, ಆ ಕುರಿತು ಹಲವಾರು ಆಕ್ಷೇಪಗಳು ವ್ಯಕ್ತವಾಗಿದ್ದವು. ಇನ್ನು ಈ ವಿಚಾರದ ಬಗ್ಗೆ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ಇನ್ನು ಸೋನು ನಿಗಮ್ ಕ್ಷಮೆ ಕೇಳುವ ಮೂಲಕ ತಪ್ಪು ಮಾಡಿದ್ದನ್ನ ಒಪ್ಪಿಕೊಂಡಿದ್ದರು. ಕ್ಷಮೆ ಕೇಳಿದ ಬಳಿಕ ಎಫ್ಐಆರ್ ದಾಖಲು ಮಾಡಿಕೊಳ್ಳಲಾಗಿದೆ. ಎಫ್ಐಆರ್ ದಾಖಲಿಸಿ ನೋಟಿಸ್ ಕೂಡ ನೀಡಲಾಗಿದೆ. ಇಂದು ಸೋನು ನಿಗಮ್ ಪರವಾಗಿ ಅವರ ವಕೀಲರು ಹಾಜರಾಗಿ, ತಪ್ಪು ಉದ್ದೇಶದಿಂದ ಅವರು ಏನನ್ನೂ ಹೇಳಿಲ್ಲ ಎಂದು ವಿವರಣೆ ನೀಡಿದರು. ಈ ವಾದ, ಪ್ರತಿವಾದ ಆಲಿಸಿದ ಹೈಕೋರ್ಟ್ ಪೊಲೀಸರು ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಆದೇಶ ನೀಡಲಾಗಿದೆ. ಅಲ್ಲದೇ ವಿಚಾರಣೆಗೆ ಸಹಕರಿಸುವಂತೆ ಸೋನು ನಿಗಮ್ಗೂ ಸೂಚನೆ ನೀಡಿದೆ.