ಹಾಸನ : ಇತ್ತೀಚಿನ ದಿನಗಳಲ್ಲಿ ರಾಜ್ಯದಾದ್ಯಂತ ಹೃದಯಾಘಾತದ ಪ್ರಕರಣಗಳು ಎಗ್ಗಿಲ್ಲದೇ ಏರುತ್ತಿದ್ದು, ಅದರಲ್ಲೂ ಯುವಕ-ಯುವತಿಯರು ಬಲಿಯಾಗುತ್ತಿರುವ ಘಟನೆಗಳು ಏರಿಕೆ ಆಗ್ತಾನೆ ಇದೆ. ಇತ್ತೀಚೆಗೆ ಓರ್ವ ಯುವಕ ಹಾಗೂ ಯುವತಿ ಹೃದಯಾಘಾತದಿಂದ ಮೃತಪಟ್ಟಿರುವ ಸುದ್ದಿ ಮಾಸುವ ಮುನ್ನವೇ, ಹಾಸನದಲ್ಲಿ ಮತ್ತೊಂದು ದುರ್ಘಟನೆ ನಡೆದಿದೆ. ಪದವಿ ಓದುತ್ತಿದ್ದ ವಿದ್ಯಾರ್ಥಿನಿಯೋರ್ವಳು ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ನಡೆದಿದೆ.
ಹಾಸನ ಜಿಲ್ಲೆಯ ಕೆಲವತ್ತಿ ಗ್ರಾಮದಲ್ಲಿ ನಿವಾಸಿ 21 ವರ್ಷದ ಪದವಿ ವಿದ್ಯಾರ್ಥಿನಿ ಕವನಾ ಮೃತ ದುರ್ದೈವಿಯಾಗಿದ್ದಾಳೆ. ಹಾಸನ ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದಳು.
ನಿನ್ನೆ ಸಂಜೆ ಪರೀಕ್ಷೆ ಮುಗಿಸಿಕೊಂಡು ಮನೆಗೆ ಬಂದ ಕವನಾ, ತಾಯಿಗೆ ನೀರು ತರಲು ಹೇಳಿದ್ದಳು. ಆದರೆ, ತಾಯಿ ನೀರು ತರುವಷ್ಟರಲ್ಲಿ ಆಕೆ ದಿಢೀರ್ ಎದೆನೋವಿನಿಂದ ಮನೆಯಲ್ಲೇ ಕುಸಿದು ಬಿದ್ದಿದ್ದಾಳೆ. ಕೂಡಲೇ ಆಕೆಯನ್ನು ಹಾಸನದ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದಾರೆ, ಆದರೆ ಅಷ್ಟರಲ್ಲಾಗಲೇ ಯುವತಿ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.