ಗುಬ್ಬಿ:
ಇತಿಹಾಸ ಪ್ರಸಿದ್ದ ಗುಬ್ಬಿ ತಾಲೂಕಿನ ಹಾಗಲವಾಡಿ ಗ್ರಾಮದ ಶ್ರೀ ಕರಿಯಮ್ಮ ದೇವಿಯ ಮಹಾ ರಥೋತ್ಸವ ಸಹಸ್ರಾರು ಭಕ್ತರ ಸಮೂಹದಲ್ಲಿ ವಿಜೃಂಭಣೆಯಿಂದ ಜರುಗಿತು. ಜಾತ್ರಾ ಮಹೋತ್ಸವದ ಅಂಗವಾಗಿ ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳು, ಹೋಮ-ಹವನ ಜರುಗಿತು. ಅಲ್ದೇ ಶ್ರೀ ಕರಿಯಮ್ಮ ದೇವರಿಗೆ ಹಾಗೂ ದೇವಸ್ಥಾನಕ್ಕೆ ಹಲವು ಬಗೆಯ ಹೂಗಳಿಂದ ವಿಶೇಷ ಅಲಂಕಾರ ಮಾಡಲಾಗಿದ್ದು, ಭಕ್ತರ ಕಣ್ಮನ ಸೆಳೆಯಿತು,
ರಥೋತ್ಸವ ಪ್ರಯುಕ್ತ ಯಕ್ಕಲಕಟ್ಟೆ ಶ್ರೀ ಆಂಜನೇಯಸ್ವಾಮಿ ಹಾಗೂ ಶ್ರೀ ಕೊಲ್ಲಾಪುರದಮ್ಮ ದೇವರುಗಳ ಆಗಮನದೊಂದಿಗೆ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಎಳೆಯಲಾಯ್ತು. ರಥ ಎಳೆಯುತ್ತಿದ್ದಂತೆ ಬಾಳೆಹಣ್ಣು, ದವನ ಎಸೆದು ಭಕ್ತರು ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಂಡ್ರು. ಇನ್ನು ರಥೋತ್ಸವ ಸಾಗುವ ಮಾರ್ಗದುದ್ದಕ್ಕೂ ಅರೇವಾದ್ಯ, ಸೋಮನ ಕುಣಿತ, ಕಹಳೆ ಹಾಗೂ ನಾದಸ್ವರ ಸೇರಿದಂತೆ ದೇವರ ಉತ್ಸವ ಮೂರ್ತಿಗಳಿದ್ದವು. ಜೊತೆಗೆ ರಥೋತ್ಸವ ಅಂಗವಾಗಿ ಹರಕೆ ಹೊತ್ತ ಹಲವರು ಬಾಯಿಬೀಗ ಹಾಕಿಸಿಕೊಳ್ಳುವ ಮೂಲಕ ಅಮ್ಮನವರ ಹರಕೆ ತೀರಿಸಿದ್ದು ವಿಶೇಷವಾಗಿತ್ತು.
ಇನ್ನು ಜಿಲ್ಲೆಯ ನಾನಾ ಭಾಗಗಳಿಂದ ಭಕ್ತರು ರಥೋತ್ಸವಕ್ಕೆ ಆಗಮಿಸಿದ್ದು, ಭಕ್ತರಿಗೆ ತೊಂದರೆಯಾಗದಂತೆ ದಾಸೋಹ ವ್ಯವಸ್ಥೆಯನ್ನು ಕೂಡ ಮಾಡಲಾಗಿತ್ತು. ಇನ್ನು ರಥೋತ್ಸವವು ದೇವಾಲಯದಿಂದ ಹೊರಟು ಸಿಡಿಕಲ್ಲು ಉತ್ಸವಕ್ಕೆ ಕೊನೆಗೊಂಡಿತು.