GUBBI : ಗೂಗಲ್ ಲೊಕೇಷನ್ ಬಳಸಿ, ಟೆಂಪಲ್ ನಿಯರ್ ಬೈ ಮೀ ಅಂತಾ ಸರ್ಚ್ ಮಾಡಿ ದೇವಸ್ಥಾನಗಳನ್ನೇ ಹುಡುಕಿ ಹುಡುಕಿ ಕಳ್ಳತನ ಮಾಡ್ತಿದ್ದ ಇಬ್ಬರು ಹೈಫೈ ಖದೀಮರನ್ನು ಹೆಡೆಮುರಿ ಕಟ್ಟುವಲ್ಲಿ ತುಮಕೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಟೆಕ್ನಾಲಜಿಯನ್ನ ಈ ಕಳ್ಳರು ಅದೆಷ್ಟು ಚೆನ್ನಾಗಿ ಬಳಸಿಕೊಳ್ತಾರೆ ಅನ್ನೋದಕ್ಕೆ ಈ ಪ್ರಕರಣವೇ ಸಾಕ್ಷಿ. ಗೂಗಲ್ ಲೊಕೇಶನ್ ಬಳಸಿ temple near by me ಎಂದು ಸರ್ಚ್ ಮಾಡಿ, ಹತ್ತಿರದ ದೇವಸ್ಥಾನಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಖದೀಮರನ್ನು ಸಿ.ಎಸ್.ಪುರ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ತಾಲ್ಲೂಕಿನ ಸಿ.ಎಸ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸಿ.ಕೊಡಿಗೇಹಳ್ಳಿ ಗ್ರಾಮದ ಕೋಡಿಕೆಂಪಮ್ಮ ದೇವಸ್ಥಾನದ ಬಾಗಿಲ ಬೀಗ ಮುರಿದ ಕಳ್ಳರು ಒಳ ಹೋಗಿದ್ದಾರೆ. ದೇವಸ್ಥಾನದ ಹುಂಡಿಯನ್ನು ಕದ್ದು ಹೊರ ಬರುವಾಗ ಯಾರೋ ಕೂಗಿದ ಶಬ್ದ ಕೇಳಿ ಹುಂಡಿ ಮತ್ತು ಕಾರನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಕಳ್ಳರು ಬಳಸಿದ್ದ ಕಾರನ್ನು ಪತ್ತೆಹಚ್ಚಿ ಇಬ್ಬರು ಕಳ್ಳರನ್ನು ಬಂಧಿಸುವಲ್ಲಿ ಸಿ.ಎಸ್.ಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಇನ್ನು ಬಂಧಿತ ಆರೋಪಿಗಳನ್ನು 21 ವರ್ಷದ ನಾಗರಾಜು ಹಾಗೂ 21 ವರ್ಷದ ನರಸಿಂಹರಾಜು ಎಂದು ಗುರುತಿಸಲಾಗಿದೆ. ಇಬ್ಬರೂ ಕಳ್ಳರು ಶಿವಮೊಗ್ಗ ಮೂಲದವರು ಎನ್ನಲಾಗಿದ್ದು, ಸದ್ಯ ಈಗ ಪೊಲೀಸರ ಅತಿಥಿಗಳಾಗಿದ್ದಾರೆ.
ಶಿರಾ ಡಿವೈಎಸ್ಪಿ ಬಿ.ಕೆ.ಶೇಖರ್ ಅವರ ಮಾರ್ಗದರ್ಶನದ ಮೇರೆಗೆ ಗುಬ್ಬಿ ವೃತ್ತದ ಸಿಪಿಐ ರಾಘವೇಂದ್ರ ಟಿ.ಆರ್ ಸೇರಿದಂತೆ ಸಿ.ಎಸ್ ಪುರ ಪೊಲೀಸ್ ಠಾಣೆಯ ಪಿಎಸ್ಐ ಶಿವಕುಮಾರ್ ಹಾಗೂ ಸಿಬ್ಬಂದಿ ಸಿದ್ದರಾಜು, ರಾಜು, ವಿಜಯಕುಮಾರ್ ಮತ್ತು ಭೀಮೇಶ್ ಎಂಬ ಕಾರ್ಯಾಚರಣೆಯನ್ನ ನಡೆಸಿ ಈ ಕಳ್ಳರನ್ನು ಬಂಧಿಸಿದ್ದು, ಸಿಬ್ಬಂದಿಯ ಕಾರ್ಯವೈಖರಿಯನ್ನು ತುಮಕೂರು ಎಸ್ಪಿ ಅಶೋಕ್ ವೆಂಕಟ್ ಪ್ರಶಂಸಿದ್ದಾರೆ.