ಸಿನಿಮಾ : ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ‘ಜೇಮ್ಸ್’ ಖ್ಯಾತಿಯ ನಿರ್ದೇಶಕ ಚೇತನ್ ಕುಮಾರ್ ಅವರ ನಡುವಿನ ಹೊಸ ಚಿತ್ರ ಪ್ರಾಜೆಕ್ಟ್ಗೂ ಗ್ರೀನ್ ಸಿಗ್ನಲ್ ದೊರೆತಿದೆ. ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಯಶಸ್ಸಿನ ಬಳಿಕ, ಗಣೇಶ್ ಅವರ ಹೊಸ ಸ್ಕ್ರಿಪ್ಟ್ ಆಯ್ಕೆಯಲ್ಲಿ ಕಳಕಳಿ ಸ್ಪಷ್ಟವಾಗಿದೆ.
ಒಂದು ವರ್ಷದ ಹಿಂದೆಯೇ ಚೇತನ್ ಕುಮಾರ್ ಈ ಚಿತ್ರದ ಕಥೆ ಗಣೇಶ್ ಅವರಿಗೆ ಪ್ರಸ್ತುತಪಡಿಸಿದ್ದರು. ಇತ್ತೀಚೆಗೆ ಸ್ಕ್ರಿಪ್ಟ್ ಕೇಳಿದ ಗಣೇಶ್ ಅವರಿಗೆ ಕಥೆ ತುಂಬಾ ಇಷ್ಟವಾಗಿ, ಚಿತ್ರಕ್ಕೆ ಒಪ್ಪಿಗೆ ನೀಡಿದ್ದಾರೆ. ಚಿತ್ರ ನಿರ್ಮಾಣದ ಪ್ರಕ್ರಿಯೆ ಈಗ ಗತಿಯಲ್ಲಿದ್ದು, ಆಗಸ್ಟ್ ಅಥವಾ ಸೆಪ್ಟೆಂಬರ್ನಲ್ಲಿ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆ.
ಈ ಮಧ್ಯೆ, ‘ಯುವರ್ಸ್ ಸಿನ್ಸಿಯರ್ಲಿ ರಾಮ್’ ಚಿತ್ರದಲ್ಲಿ 'ಹನುಮಾನ್' ಖ್ಯಾತಿಯ ಅಮೃತಾ ಅಯ್ಯರ್ ಜೊತೆ ನಟನೆಯಲ್ಲಿರುವ ಗಣೇಶ್, ಈ ಸಿನಿಮಾದ ಶೂಟಿಂಗ್ ಮುಗಿಸಿದ ಬಳಿಕ ಚೇತನ್ ಅವರ ಚಿತ್ರಕ್ಕೆ ಕಾಲಿಡಲಿದ್ದಾರೆ. ಇತ್ತ, ಚೇತನ್ ಕುಮಾರ್ ಕೂಡಾ ‘ಗಟ್ಟಿಮೇಳ’ ಧಾರಾವಾಹಿ ಖ್ಯಾತಿಯ ರಕ್ಷ್ ಜೊತೆ ಬರ್ಮ ಸಿನಿಮಾ ಶೂಟಿಂಗ್ ನಲ್ಲಿ ನಿರತರಾಗಿದ್ದಾರೆ.
ಈ ಇಬ್ಬರೂ ತಮ್ಮ ಪ್ರಸ್ತುತ ಚಿತ್ರಗಳನ್ನು ಪೂರ್ಣಗೊಳಿಸಿದ ಬಳಿಕ ಮಾತ್ರ ಈ ಹೊಸ ಸಿನಿಮಾ ಸೆಟ್ಟೇರಲಿದ್ದು, ಅಭಿಮಾನಿಗಳು ಈ ಹೊಸ ಕಾಂಬಿನೇಷನ್ ಚಿತ್ರಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ.