ತಿಪಟೂರು:
ಬೇಸಿಗೆ ಆರಂಭದಲ್ಲಿಯೇ ತುಮಕೂರು ಜಿಲ್ಲೆಯಲ್ಲಿ ಬೆಂಕಿ ದುರಂತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅರಣ್ಯ ಸಂಪತ್ತು, ಜಮೀನುಗಳು ಜಮೀನಿನಲ್ಲಿದ್ದ ಗಿಡ- ಮರಗಳು, ಬೆಳೆಗಳು ಸುಟ್ಟು ಭಸ್ಮವಾಗುತ್ತಿವೆ. ಅದೆಷ್ಟೇ ಮುಂಜಾಗ್ರತಾ ಕ್ರಮ ಕೈಗೊಂಡರು ಕೂಡ ಬಿಸಿಲಿನ ತಾಪಮಾನಕ್ಕೆ ಬೆಂಕಿ ಅವಘಡಗಳು ಮಾತ್ರ ಸಾಲು ಸಾಲಾಗಿ ನಡೆಯುತ್ತಲೇ ಇದ್ದು ಜನರು ತತ್ತರಿಸಿ ಹೋಗಿದ್ದಾರೆ.
ತಿಪಟೂರು ತಾಲೂಕಿನ ಹೊನ್ನವಳ್ಳಿ ಹೋಬಳಿಯ ತಮ್ಮಡಿಹಳ್ಳಿ ಬಳಿ ಖಾಸಗಿ ಜಮೀನಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ಜಮೀನಿನಲ್ಲಿ ನಾಲ್ಕರಿಂದ ಐದು ಅಡಿ ಎತ್ತರಕ್ಕೆ ಹುಲ್ಲು ಬೆಳೆದು ನಿಂತಿದ್ದು ಬಿಸಿಲಿನ ತಾಪಮಾನ ಹೆಚ್ಚಾಗಿ ಬೆಂಕಿ ಹೊತ್ತಿಕೊಂಡಿದೆ. ಸುಮಾರು ಎರಡು-ಮೂರು ಎಕರೆ ಜಮೀನಿನವರೆಗೂ ಬೆಂಕಿ ಆವರಿಸಿ ಧಗಧಗನೆ ಹೊತ್ತಿ ಉರಿದಿದೆ. ಬೆಂಕಿಯ ಜ್ವಾಲೆಯಿಂದ ದಟ್ಟ ಹೊಗೆ ಆವರಿಸಿದ್ದು ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿತ್ತು.
ಕೂಡಲೇ ಸ್ಥಳೀಯರು ಅಗ್ನಿ ಶಾಮಕ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸ ಮಾಡಿದ್ದು, ಅಕ್ಕಪಕ್ಕದ ಮನೆ, ಕಾಯಿ ತುಂಬಿದ ಶೆಡ್, ಹುಲ್ಲಿನ ಬಣವೆ, ದನ ಕರುಗಳನ್ನು ರಕ್ಷಿಸಿದ್ದು ಅಪಾರ ನಷ್ಟ ತಪ್ಪಿದಂತಾಗಿದೆ. ಇನ್ನು ಬೇಸಿಗೆ ಮುಗಿಯುವವರೆಗೂ ಅಗ್ನಿ ಶಾಮಕ ದಳ ಸಿಬ್ಬಂದಿ ಹಾಗೂ ಅಗ್ನಿ ಶಾಮಕ ವಾಹನದ ಅವಶ್ಯಕತೆ ಹೆಚ್ಚಾಗಿದ್ದು ಜಿಲ್ಲೆ, ಹಾಗೂ ತಾಲೂಕು ಕೇಂದ್ರಗಳಲ್ಲಿ ಹೆಚ್ಚುವರಿ ಅಗ್ನಿಶಾಮಕ ದಳದ ವಾಹನಗಳನ್ನು ನಿಯೋಜಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.