ತುಮಕೂರು : ಇತ್ತೀಚಿನ ದಿನಗಳಲ್ಲಿ ಪಹಣಿ ವಿಚಾರವಾಗಿ ರೈತರು ಕಚೇರಿಗಳಿಗೆ ಅಲೆದು ಸುಸ್ತಾಗಿದ್ದಾರೆ. ಮತ್ತೊಂದೆಡೆ ಯಾರದ್ದೋ ಪಹಣಿಯಲ್ಲಿ ಮತ್ಯಾರದೋ ಹೆಸರು ನಮೂದಾಗುತ್ತಿದೆ. ಇದೇ ಕಾರಣಕ್ಕೆ ಫಲಾನುಭವಿಗೆ ಸಿಗಬೇಕಾದ ಅದೆಷ್ಟೋ ಸವಲತ್ತುಗಳು ಸಿಗುತ್ತಿಲ್ಲ. ಇತ್ತ ಹೆಬ್ಬೂರಿನ ನಾಡಕಚೇರಿಯಲ್ಲಿಯೂ ಇದೇ ಪರಿಸ್ಥಿತಿ ಇದ್ದು, ರೈತರು ನಾಡಕಚೇರಿಯತ್ತ ಪಹಣಿ ತಿದ್ದುಪಡಿ ಮಾಡಿಸಲು ಅಲೆದಾಡುವಂತಾಗಿತ್ತು. ಈ ಕಾರಣಕ್ಕೆ ಉಪವಿಭಾಗಾಧಿಕಾರಿ ಗೌರವ ಕುಮಾರ ಶೆಟ್ಟಿ ತಾವೇ ಖುದ್ದು ಪರಿಶೀಲನೆ ನಡೆಸಿ ಸಮಸ್ಯೆ ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದರು.
ಹೆಬ್ಬೂರಿನ ನಾಡಕಚೇರಿಗೆ ಭೇಟಿ ನೀಡಿದ ಅವರು, ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ತುಮಕೂರಿನಲ್ಲಿ 1052 ಪಹಣಿ ತಿದ್ದುಪಡಿ ಪ್ರಕರಣಗಳಿದ್ದು, ಇದರ ಅನ್ವಯ ರೈತರು ಡಿ.ಸಿ.ಕಚೇರಿ, ತಹಶೀಲ್ದಾರ್ ಕಚೇರಿ ಅಂತ ಅಲೆದಾಡುತ್ತ, ಬ್ರೋಕರ್ಗಳ ಬಲೆಗೆ ಬಿದ್ದು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಹಾಗಾಗಿ ನಾನೇ ವಾರದಲ್ಲಿ ಒಂದು ದಿನ ಖುದ್ದು ಹೆಬ್ಬೂರು ಹೋಬಳಿಗೆ ಭೇಟಿ ನೀಡಿ ರೈತರ ಸಮಸ್ಯೆಯನ್ನು ಬಗೆಹರಿಸುತ್ತೇನೆ . ಹೆಬ್ಬೂರಿನಲ್ಲಿ 192 ಪ್ರಕರಣಗಳು ಇದ್ದು, ಪಹಣಿ ಖಾತೆದಾರರನ್ನು ಕರೆಸಿ, ವಿಚಾರಣೆ ಮಾಡಿ, ದಾಖಲಾತಿಗಳನ್ನು ಪರಿಶೀಲಿಸಿ ,16 ಪ್ರಕರಣಗಳನ್ನು ಸ್ಥಳದಲ್ಲಿಯೇ ವಿಲೇವಾರಿ ಮಾಡಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಉಪ ತಹಸಿಲ್ದಾರ್ ಭೂಮೇಶ್ ನಾಯಕ್. ರಾಜಸ್ವ ನಿರೀಕ್ಷಕರ ಮಂಜುನಾಥ್. ಹೋಬಳಿಯ ಎಲ್ಲಾ ಗ್ರಾಮ ಲೆಕ್ಕಾಧಿಕಾರಿಗಳು ಹಾಜರಿದ್ದರು.