TIPTUR NEWS : ಬೇಸಿಗೆ ರಜೆ ಮುಗಿದಿದ್ದು ಶಾಲೆ ಪುನರಾರಂಭವಾಗಿದೆ. ಮಕ್ಕಳು ಕೂಡ ಖುಷಿಖುಷಿಯಿಂದ ಶಾಲೆ ಕಡೆ ಮುಖ ಮಾಡ್ತಿದ್ದು, ಶಿಕ್ಷಕರು ತರಗತಿಗಳನ್ನ ಕೂಡ ಶುರು ಮಾಡ್ತಿದ್ದಾರೆ. ಆದ್ರೆ ಶಾಲೆ ಶುರುವಾಗಿದ್ರೂ ತಿಪಟೂರಿನ ಆ ಹಾಸ್ಟೆಲ್ ಮಾತ್ರ ಓಪನ್ ಆಗಿಲ್ಲ. ಸಮಾಜ ಕಲ್ಯಾಣ ಇಲಾಖೆಯ ಎಡವಟ್ಟಿನಿಂದಾಗಿ ಇದೀಗ ವಿದ್ಯಾರ್ಥಿನಿಯರು ಪರದಾಡುವಂತಾಗಿದೆ.
ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳೇ ಎಲ್ಲಿದ್ದೀರಿ. ಈ ಪ್ರಶ್ನೆಯನ್ನ ನಾವು ಕೇಳಲೇಬೇಕು. ಯಾಕಂದ್ರೆ ಶಾಲೆ ಆರಂಭಕ್ಕೂ ಮೊದಲೇ ಹಾಸ್ಟೆಲ್ಗಳಲ್ಲಿ ಏನೇ ಸಣ್ಣಪುಟ್ಟ ದುರಸ್ಥಿ ಇದ್ದರೂ ಅದನ್ನ ಮಾಡಿ ಸರಿಯಾಗಿ ಇಟ್ಟುಕೊಳ್ಳಬೇಕಾಗಿರೋದು ಇಲಾಖೆಯ ಅಧಿಕಾರಿಗಳ ಜವಾಬ್ದಾರಿ. ಆದ್ರೆ ಶಾಲೆ ಆರಂಭವಾಗಿ ವಾರವೇ ಕಳೆದರೂ ತಿಪಟೂರಿನ ಗಾಂಧಿನಗರದ ಲಕ್ಷ್ಮೀ ಚಿತ್ರಮಂದಿರದ ಪಕ್ಕದಲ್ಲಿರುವ ಡಾ.ಬಿ. ಆರ್.ಅಂಬೆಡ್ಕರ್ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯ ಇನ್ನೂ ಓಪನ್ ಆಗಿಲ್ಲ. ಶಾಲೆ ಶುರುವಾಗುವ ಹೊತ್ತಿನಲ್ಲಿ ಹಾಸ್ಟೆಲ್ ದುರಸ್ಥಿ ಕಾಮಗಾರಿ ಆರಂಭಿಸಿದ್ದು, ಹೀಗಾಗಿ ಇನ್ನೂ ಹಾಸ್ಟೆಲ್ ಓಪನ್ ಮಾಡಿಲ್ಲ. ಇದರಿಂದಾಗಿ ದೂರದೂರುಗಳಿಂದ ಬರುವ ವಿದ್ಯಾರ್ಥಿ ನಿಯರು ತೊಂದರೆ ಅನುಭವಿಸುವಂತಾಗಿದೆ.
ತರಗತಿಗಳು ಶುರುವಾಗಿರೋದ್ರಿಂದ ಶಿಕ್ಷಕರು ಪೋಷಕರಿಗೆ ಕರೆ ಮಾಡಿ ಮಕ್ಕಳನ್ನ ಶಾಲೆಗೆ ಕಳುಹಿಸಿಕೊಡುವಂತೆ ಹೇಳುತ್ತಿದ್ದಾರೆ. ಆದ್ರೆ ದೂರದೂರುಗಳಿಂದ ಬರುವ ಮಕ್ಕಳಿಗೆ, ಬೇರೆ ಜಿಲ್ಲೆಯ ವಿದ್ಯಾರ್ಥಿನಿಯರಿಗೆ ತಂಗಲು ವ್ಯವಸ್ಥೆಯಿಲ್ಲದೇ ಸಮಸ್ಯೆಯಾಗ್ತಿದೆ. ತಿಪಟೂರು ಹೇಳಿಕೇಳಿ ಶೈಕ್ಷಣಿಕ ನಗರಿ ಅಂತಲೇ ಪ್ರಖ್ಯಾತಿ ಪಡೆದಿರೋ ನಗರ. ಹೀಗಾಗಿ ಬೇರೆ ಬೇರೆ ಜಿಲ್ಲೆಗಳಿಂದಲೂ ಮಕ್ಕಳು ಇಲ್ಲಿಗೆ ವಿದ್ಯಾಭ್ಯಾಸಕ್ಕೆಂದು ಬರ್ತಾರೆ. ಅದೇ ರೀತಿ ಶಿವಮೊಗ್ಗದ ಭದ್ರಾವತಿ ಮೂಲದ ತೀರ್ಥಕುಮಾರಿ ಎಂಬ ವಿದ್ಯಾರ್ಥಿನಿ ಈ ಹಾಸ್ಟೆಲ್ಗೆ ಅರ್ಜಿ ಹಾಕಿದ್ದಳು. ಹಾಸ್ಟೆಲ್ ಸೀಟ್ ಸಿಕ್ಕ ಕಾರಣ ತನ್ನ ಅಜ್ಜಿ ಜೊತೆ ಇಂದು ಈ ವಿದ್ಯಾರ್ಥಿನಿ ಹಾಸ್ಟೆಲ್ಗೆ ಬಂದು ನೋಡಿದ್ರೆ ಹಾಸ್ಟೆಲ್ ಖಾಲಿ ಖಾಲಿ. ಅಷ್ಟು ದೂರದ ಊರಿನಿಂದ ಲಗೇಜು ತೆಗೆದುಕೊಂಡು ಬಂದು ಇಲ್ಲಿ ನೋಡಿದ್ರೆ ಹಾಸ್ಟೆಲ್ ದುರಸ್ಥಿಯಲ್ಲಿದ್ದು, ಯಾವೊಬ್ಬ ಸಿಬ್ಬಂದಿ ಕೂಡ ಇಲ್ಲದಿರೋದ್ರಿಂದ ಕಂಗಾಲಾಗಿದ್ದಾರೆ. ಇನ್ನು ಈ ಬಗ್ಗೆ ಹಾಸ್ಟೆಲ್ ವಾರ್ಡನ್ಗೆ ಫೋನ್ ಮಾಡಿ ಕೇಳಿದರೆ, ಮುಂದಿನ ವಾರದಿಂದ ಮಕ್ಕಳನ್ನು ಸೇರಿಸಿಕೊಳ್ಳುತ್ತೇವೆ ಎಂದು ಉಡಾಫೆ ಮಾತುಗಳನ್ನ ಆಡುತ್ತಿದ್ದಾರಂತೆ.
ಶಾಲೆ ರಜೆ ಹಿನ್ನೆಲೆ ಸುಮಾರು ಮೂರು ತಿಂಗಳು ಹಾಸ್ಟೆಲ್ ಖಾಲಿ ಇತ್ತು. ಆಗ ಏನೇ ದುರಸ್ಥಿ ಕಾಮಗಾರಿ ಇದ್ದರೂ ಮಾಡಿಕೊಳ್ಳಬಹುದಿತ್ತು. ಆದ್ರೆ ಅದನ್ನ ಬಿಟ್ಟು ಅಧಿಕಾರಿಗಳು ಶಾಲೆ ಶುರುವಾಗುವ ಸಂದರ್ಭದಲ್ಲಿ ದುರಸ್ಥಿ ಕಾಮಗಾರಿಯನ್ನ ಶುರುಮಾಡಿದ್ದಾರೆ. ದುರಸ್ಥಿ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿರುವುದರಿಂದ ಮಕ್ಕಳು ಸಮಸ್ಯೆ ಅನುಭವಿಸುವಂತಾಗಿದೆ. ಈ ಬಗ್ಗೆ ದಲಿತ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ.
ಇನ್ನು ಹಾಸ್ಟೆಲ್ನಲ್ಲಿ ಸದ್ಯ ಕಾಮಗಾರಿ ನಡೆಯುತ್ತಿದೆ. ಆದರೆ ನೆಲಕ್ಕೆ ಹಾಕಿರುವ ಟೈಲ್ಸ್ ಮೇಲ ಕಾಲಿಡುತ್ತಿದ್ದಂತೆ ಅದು ಮೇಲೆದ್ದು ಬರ್ತಿದೆ. ಶೌಚಾಲಯದಲ್ಲಿ ಕಿಟಕಿಯ ಗಾಜುಗಳು ಒಡೆದು ಹೋಗಿವೆ. ಕುಡಿಯುವ ನೀರಿನ ವಾಟರ್ ಫಿಲ್ಟರ್ ಕೂಡ ಕೆಟ್ಟು ಹಲವು ದಿನಗಳೇ ಕಳೆದುಹೋಗಿವೆಯಂತೆ. ವಿದ್ಯಾರ್ಥಿನಿಯರ ಹಾಸ್ಟೆಲ್ ಆಗಿರೋದ್ರಿಂದ ಸಿಸಿ ಕ್ಯಾಮೆರಾ ಕೂಡ ಬಹಳ ಮುಖ್ಯ. ಆದರೆ ಇವು ಕೂಡ ಕಿತ್ತು ಹೋಗಿವೆ. ಇಷ್ಟೆಲ್ಲಾ ಇದ್ದರೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮಾತ್ರ ಕಣ್ಣಿದ್ದು ಕುರುಡರಾಗಿದ್ದಾರೆ. ಇನ್ನು ಮೂರ್ನಾಲ್ಕು ದಿನದೊಳಗೆ ಹಾಸ್ಟೆಲ್ ಕಾಮಗಾರಿಯನ್ನ ಪೂರ್ಣಗೊಳಿಸಿ ಮಕ್ಕಳ ಪ್ರವೇಶಾತಿಗೆ ಅವಕಾಶ ಕಲ್ಪಿಸಬೇಕು. ಇಲ್ಲವಾದಲ್ಲಿ ಹಾಸ್ಟೆಲ್ ಮುಂಭಾಗ ಹೋರಾಟ ಮಾಡಬೇಕಾಗುತ್ತೆ ಎಂದು ದಲಿತ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಒಟ್ಟಿನಲ್ಲಿ ಶಾಲೆಗಳು ಆರಂಭವಾಗಿದ್ರೂ ಹಾಸ್ಟೆಲ್ ಮಾಡದೇ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದು ಇದರಿಂದ ವಿದ್ಯಾರ್ಥಿನಿಯರಿಗೆ ತೊಂದರೆ ಆಗ್ತಿರೋದು ಮಾತ್ರ ಸುಳ್ಳಲ್ಲ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ವಿದ್ಯಾರ್ಥಿನಿಯರಿಗೆ ಅನುಕೂಲ ಮಾಡಿಕೊಡ್ಬೇಕಿದೆ.