ದೊಡ್ಡಬಳ್ಳಾಪುರ :
ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಆಗಿ ಕೇವಲ ಒಂದು ವರ್ಷ ಮಾತ್ರ ಆಗಿದೆ. ಮೊದಲು ಹೈವೇ ಉದ್ಘಾಟನೆ ಆಯ್ತಲ್ಲಾ ಎಂಬ ಸಂತೋಷದಲ್ಲಿದ್ದ ಜನರು ಈಗ ಹಿಡಿಶಾಪ ಹಾಕುವಂತಾಗಿದೆ. ಹೇಗೂ ಹೈವೇ ಆಗಿದೆ ಸುಲಭವಾಗಿ ಮನೆ ಸೇರುತ್ತೇವೆ ಎಂದುಕೊಂಡಿದ್ದವರು ಅಪಘಾತಕ್ಕೆ ತುತ್ತಾಗಿ ಕೈಕಾಲು ಮುರಿದುಕೊಂಡು, ತಲೆಬುರುಡೆ ಒಡೆದುಕೊಂಡು ಆಸ್ಪತ್ರೆ ಪಾಲಾದರೆ, ಇನ್ನೂ ಕೆಲವರು ದೇವರ ಪಾದವನ್ನು ಸೇರುತ್ತಿದ್ದಾರೆ
ದಾಬಸ್ಪೇಟೆಯಿಂದ ಹೊಸಕೋಟೆಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 648ರ ಪರಿಸ್ಥಿತಿಯಿದು. ಈ ಹೈವೇಯಲ್ಲಿ ಹುಲಿಕುಂಟೆ ಟೋಲ್ ಪ್ರಾರಂಭ ಆಗಿ ಕೇವಲ ಒಂದು ವರ್ಷ ಮಾತ್ರ ಆಗಿದೆ. ಈ ರಸ್ತೆ ಮೂಲಕ ಸಂಚಾರ ಮಾಡುವ ಪ್ರತಿಯೊಂದು ವಾಹನದಿಂದ ಟೋಲ್ ಸಂಗ್ರಹ ಮಾಡುತ್ತಾರೆ. ಆದರೆ ಸವಾರರಿಗೆ ಮಾತ್ರ ಸರಿಯಾದ ವ್ಯವಸ್ಥೆಗಳನ್ನು ಮಾಡುತ್ತಿಲ್ಲ. ಗೀತಂ ಯೂನಿವರ್ಸಿಟಿಯಿಂದ ಹುಲಿಕುಂಟೆ ಟೋಲ್ ವರೆಗೆ ರಸ್ತೆಯಲ್ಲಿ ಸಾಕಷ್ಟು ಕಡೆ ಉಬ್ಬು ತಗ್ಗುಗಳಿವೆ. ಹಾಗಾಗಿ ವಾಹನಗಳು ರಸ್ತೆ ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿ ಆಗುತ್ತಿವೆ. ರಸ್ತೆ ವಿಭಜಕಗಳಲ್ಲಿ ಸೂಕ್ತ ನಿರ್ವಹಣೆ ಇಲ್ಲದೆ ಗಿಡಗಳು ಒಣಗುತ್ತಿವೆ. ಇರಬೇಕಾದ ಸ್ಥಳಗಳಲ್ಲಿ ಸೂಚನಾ ಫಲಕಗಳಿಲ್ಲ. ಇನ್ನೂ ಹಲವಾರು ನ್ಯೂನ್ಯತೆಗಳು ಇರುವುದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗಿ, ಸಾವು ನೋವುಗಳು ಸಂಭವಿಸುತ್ತಿವೆ.
ಇನ್ನೂ ರಸ್ತೆಯ ಉಬ್ಬು ತಗ್ಗುಗಳು ಕಾಣದೇ ಕಳೆದ ಒಂದು ವಾರದ ಅಂತರದಲ್ಲಿ ಹತ್ತಾರು ಅಪಘಾತಗಳು ಸಂಭವಿಸಿದ್ದು, ೧೫ಕ್ಕೂ ಹೆಚ್ಚು ಜನರು ಕೈಕಾಲುಗಳನ್ನು ಮುರಿದುಕೊಂಡಿದ್ದಾರೆ. ಜೊತೆಗೆ ಇಬ್ಬರು ಪ್ರಾಣವನ್ನೂ ಬಿಟ್ಟಿದ್ದಾರೆ. ರಸ್ತೆಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿವೆ. ಆದರೆ, ಹೆದ್ದಾರಿಯ ಅಧಿಕಾರಿಗಳು ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಮೈಸೂರು ರಸ್ತೆ ಸಮಸ್ಯೆ ಆದಾಗ ಇಡೀ ಸರ್ಕಾರವೇ ಅದರ ಬಗ್ಗೆ ಗಮನಹರಿಸಿತ್ತು. ಆದರೆ ಇಲ್ಲಿ ಇಷ್ಟು ಅಪಘಾತಗಳು ಸಂಭವಿಸುತ್ತಿವೆ. ಇಷ್ಟಾದರೂ ಯಾವುದೇ ಸೂಕ್ತ ಕ್ರಮಗಳು ಆಗುತ್ತಿಲ್ಲ. ಸರಿಯಾದ ಸಮಯಕ್ಕೆ ಟೋಲ್ನ ಆಂಬ್ಯುಲೆನ್ಸ್ ಸ್ಥಳಕ್ಕೆ ಬರುತ್ತಿಲ್ಲ. ಯಾವಾಗಲೂ ಖಾಸಗಿ ಅಂಬ್ಯುಲೆನ್ಸ್ ಟೋಲ್ ನ ಬಳಿಯೇ ಇರುತ್ತದೆ. ಹಾಗಾಗಿ ಅಪಘಾತ ಆದಾಗ ಖಾಸಗಿ ಆಂಬ್ಯುಲೆನ್ಸ್ ಗಳು ಸ್ಥಳಕ್ಕೆ ಬಂದು, ಉಪಚರಿಸುವ ನೆಪದಲ್ಲಿ ಬಡವರ ಜೇಬು ಖಾಲಿ ಮಾಡಿಸುತ್ತಿವೆ. ಹಾಗಾಗಿ ನಗರ ಪ್ರದೇಶದಲ್ಲಿ ಆಂಬ್ಯುಲೆನ್ಸ್ ಇರಬೇಕು ಎಂದು ಕರವೇ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಆಗ್ರಹಿಸಿದೆ. ಒಂದು ವೇಳೆ ಸೂಕ್ತ ಕ್ರಮ ತೆಗೆದುಕೊಳ್ಳದಿದ್ದರೆ ಉಗ್ರ ಹೋರಾಟ ಮಾಡುವುದರ ಜೊತೆಗೆ ರಸ್ತೆ ತಡೆದು, ಟೋಲ್ ಸಂಗ್ರಹ ಮಾಡಲು ಬಿಡುವುದಿಲ್ಲ ಎಂದು ಕರವೇ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.
ಒಟ್ಟಾರೆ ದಾಬಸ್ಪೇಟೆಯಿಂದ ಹೊಸಕೋಟೆಗೆ ಸಂಪರ್ಕ ಕಲ್ಪಿಸೋ ಹೊಸ ಹೆದ್ದಾರಿ ಸಾವಿನ ರಹದಾರಿಯಾಗಿ ಮಾರ್ಪಟ್ಟಿದೆ. ಇನ್ನಾದರೂ ಟೋಲ್ ಸಿಬ್ಬಂದಿ ಮತ್ತು ಪೊಲೀಸ್ ಇಲಾಖೆ ಸೂಕ್ತ ಕ್ರಮ ವಹಿಸಿ ಅಪಘಾತಗಳಿಗೆ ಕಡಿವಾಣ ಹಾಕುತ್ತಾರಾ ಕಾದು ನೋಡಬೇಕಿದೆ.