
ಡಾ.ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿ ನಿರ್ಮಾಣ ಮಾಡುವಂತೆ ಗ್ರಾಮ ಪಂಚಾಯ್ತಿಗೆ ಮನವಿ ಪತ್ರ ಸಲ್ಲಿಸಿದ ದಲಿತ ಸಂಘರ್ಷ ಸಮಿತಿತುಮಕೂರು
ಗುಬ್ಬಿ:
ಗುಬ್ಬಿ ತಾಲೂಕಿನ ಕಡಬ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿ ನಿರ್ಮಾಣ ಮಾಡುವಂತೆ ದಲಿತ ಸಂಘರ್ಷ ಸಮಿತಿಯ ಸದಸ್ಯರು ಗ್ರಾಮ ಪಂಚಾಯ್ತಿ ಪಿಡಿಒ ಗೆ ಮನವಿ ಪತ್ರ ಸಲ್ಲಿಸಿದರು. ಮನವಿ ಸ್ವೀಕರಿಸಿದ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ, ಉಪಾಧ್ಯಕ್ಷೆ ಕಲ್ಪನಾ ಹಾಗೂ ಪಿಡಿಒ ನಟರಾಜ್ ಅವರು ಮುಂದಿನ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿ ಸದಸ್ಯರ ಒಮ್ಮತ ಪಡೆದು ಕೆಲಸ ಮಾಡಿಸುವ ಭರವಸೆ ನೀಡಿದರು.
ಈ ವೇಳೆ ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ಕಡಬ ಶಂಕರ್ ಮಾತನಾಡಿ, ಕಡಬ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕೆ ಸೂಕ್ತ ಸ್ಥಳ ನೀಡಿ, ಪುತ್ಥಳಿ ನಿರ್ಮಿಸಿ ಅನಾವರಣಗೊಳಿಸುವ ತನಕ ಸಂಪೂರ್ಣ ಜವಾಬ್ದಾರಿಯನ್ನು ಗ್ರಾಮ ಪಂಚಾಯ್ತಿಯೇ ವಹಿಸಿಕೊಳ್ಳಬೇಕು. ಅಲ್ಲದೇ ನಾಲ್ಕು ಲಕ್ಷ ಅಂದಾಜು ವೆಚ್ಚದ ಪ್ರತಿಮೆ ನಿರ್ಮಾಣಕ್ಕೆ ಪಂಚಾಯ್ತಿ ವತಿಯಿಂದ ಶೇಕಡಾ 25 ರಷ್ಟು ಮೀಸಲು ಹಣ ಬಳಕೆ ಮಾಡಲು ಅನುವು ಮಾಡಿಕೊಡಬೇಕು ಎಂದರು. ಮುಂದಿನ ಸಭೆಯಲ್ಲೇ ಈ ವಿಚಾರ ಪ್ರಸ್ತಾಪಿಸಿ ಸದಸ್ಯರ ನಿರ್ಣಯದಂತೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲು ಹಣವನ್ನೇ ಬಳಸಿ ಪಂಚಾಯ್ತಿ ಸಮೀಪದಲ್ಲೇ ಪುತ್ಥಳಿ ಅನಾವರಣ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಬೇಕು ಇಲ್ಲವಾದಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.