ಚಿಕ್ಕನಾಯಕನಹಳ್ಳಿ :
ಚಿಕ್ಕನಾಯಕನಹಳ್ಳಿ ತಾಲೂಕಿನ ಬರಗೂರಿನಲ್ಲಿ ರೈತ ಗಣೇಶ್ ಎಂಬುವವರಿಗೆ ಸೇರಿದ್ದ ಅಡಿಕೆ ಗಿಡಗಳನ್ನು ಕಿಡಿಗೇಡಿಗಳು ರಾತ್ರೋ ರಾತ್ರಿ ಕಡಿದು ಪರಾರಿಯಾಗಿದ್ದರು. ಕಿಡಿಗೇಡಿಗಳ ಕೃತ್ಯಕ್ಕೆ ರೈತ ಗಣೇಶ್ ಎಂಬುವವರು ಕಂಗಾಲಾಗಿದ್ದರು. ತಮ್ಮ ಕ್ಷೇತ್ರದಲ್ಲಿ ರೈತನಿಗೆ ಆದ ಅನ್ಯಾಯವನ್ನು ಸಹಿಸದ ಮಾಜಿ ಸಚಿವ ಮಾಧುಸ್ವಾಮಿ ನಿನ್ನೆ ರಾತ್ರಿ ಅಡಿಕೆ ಮರಗಳನ್ನು ಕಡಿದಿದ್ದ ಸ್ಥಳ ವೀಕ್ಷಣೆ ಮಾಡಿದರು.
ಅಡಿಕೆ ಗಿಡಗಳನ್ನು ಕತ್ತರಿಸಿದ ಸ್ಥಳಕ್ಕೆ ಮಾಜಿ ಸಚಿವ ಮಾಧುಸ್ವಾಮಿ ಭೇಟಿ ನೀಡಿದ್ದು, ಕಿಡಿಗೇಡಿಗಳ ಕೃತ್ಯವನ್ನು ಖಂಡಿಸಿದರು. ಈ ವೇಳೆ ಮಾಜಿ ಸಚಿವರ ಬಳಿ ರೈತ ತಮ್ಮ ನೋವನ್ನು ತೋಡಿಕೊಂಡರು, ರೈತನ ಗೋಳಾಟ ನೋಡಲಾಗದ ಮಾಧುಸ್ವಾಮಿ ರೈತನಿಗೆ ಧೈರ್ಯ ತುಂಬಿದ್ದಾರೆ. ಇನ್ನು ಭಾನುವಾರ ರಾತ್ರಿ ಗಣೇಶ್ ಎಂಬುವವರಿಗೆ ಸೇರಿದ ತೋಟದಲ್ಲಿದ್ದ ಫಸಲಿಗೆ ಬಂದಿದ್ದ 500 ಅಡಿಕೆ ಮರಗಳನ್ನು ಕಡಿದಿದ್ದರು, ಬೆಳಗ್ಗೆ ಜಮೀನಿಗೆ ಬಂದಾಗ ದೃಷ್ಕೃತ್ಯ ಬೆಳಕಿಗೆ ಬಂದಿತ್ತು. ಕೂಡಲೇ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ, ಬಂಧಿಸುವಂತೆ ಆಗ್ರಹಿಸಿದ್ದರು.