CHIKKANAYAKANAHALLI : ಮೂಲಭೂತ ಸೌಕರ್ಯವನ್ನು ಜನರಿಗೆ ಒದಗಿಸುವುದು ಆಯಾ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ನಗರಸಭೆ ಹಾಗೂ ಪಾಲಿಕೆಯ ಜವಾಬ್ದಾರಿ. ಆದರೆ ಇಲ್ಲೊಂದು ಕಡೆ ಹಲವು ವರ್ಷಗಳಿಂದ ಚರಂಡಿ, ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಜನರು ಪರದಾಡುತ್ತಿದ್ದಾರೆ. ಇತ್ತ ಅಧಿಕಾರಿಗಳ ಗಮನಕ್ಕೆ ತಂದರೂ ಕ್ಯಾರೆ ಎನ್ನುತ್ತಿಲ್ಲವಂತೆ. ಅತ್ತ ಓಟು ಪಡೆದು ಕಾರ್ಪೋರೇಟರ್ ಇತ್ತ ತಲೆ ಹಾಕಿಯೂ ನೋಡ್ತಿಲ್ಲವಂತೆ. ಹೀಗಾಗಿ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಚಿಕ್ಕನಾಯಕನಹಳ್ಳಿಯ ವಾರ್ಡ್ ನಂ-23 ರ ಮಾರುತಿನಗರದಲ್ಲಿ ಇಂತಹದೊಂದು ಅವ್ಯವಸ್ಥೆ ಇದೆ. ಇಲ್ಲಿ ರಸ್ತೆ ನಿರ್ಮಾಣವಾಗಿ ಎಷ್ಟೋ ವರ್ಷಗಳು ಕಳದಿವೆ. ಇದುವರೆಗೂ ಆ ರಸ್ತೆಗೆ ಡಾಂಬರೀಕರಣವಾಗಿಲ್ಲ. ಇತ್ತ ಚರಂಡಿಗಳು ಕಟ್ಟಿಕೊಂಡು ಸೊಳ್ಳೆಗಳ ಅವಾಸಸ್ಥಾನವಾಗಿ ಮಾರಕ ರೋಗಗಳಿಗೆ ಜನರು ತುತ್ತಾಗ್ತಿದ್ದಾರೆ. ಅಧಿಕಾರಿಗಳಿಗೆ ತಮ್ಮ ಸಮಸ್ಯೆಯನ್ನು ಹೇಳಿದರೂ ಕೂಡ ಪುರಸಭೆಯ ಅಧಿಕಾರಿಗಳು ಮಾತ್ರ ತಲೆಕೆಡಿಸಿಕೊಳ್ಳುತ್ತಿಲ್ಲ ಅಂತ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಸರಿಯಾದ ವಿದ್ಯುತ್ ದೀಪಗಳಿಲ್ಲದೆ ರಾತ್ರಿ ವೇಳೆ ಸಂಚರಿಸಲು ಮಕ್ಕಳು, ವೃದ್ಧರು, ಮಹಿಳೆಯರು ಭಯಪಡುತ್ತಿದ್ದಾರೆ. ಚರಂಡಿ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಮಳೆ ಬಂದರೆ ನೀರು ಮನೆಗಳಿಗೆ ನುಗ್ಗುತ್ತಿದೆಯಂತೆ. ಅತ್ತ ರಸ್ತೆ ಕೂಡ ಕಿರಿದಾಗಿದ್ದು, ಗಾಡಿಗಳು ಚಲಿಸಲು ಸಾಧ್ಯವಾಗುತ್ತಿಲ್ಲ. ನಾವೆಷ್ಟು ಬಾರಿ ಶಾಸಕರಿಗೂ, ವಾರ್ಡ್ ಕೌನ್ಸಿಲರ್ ಗೆ ಮನವಿ ಮಾಡಿದ್ದರೂ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಮಾರುತಿ ನಗರದ ಚರಂಡಿ ಮತ್ತು ಮನೆಯ ಕೊಳಚೆ ನೀರು ಅಲ್ಲೆ ಇರುವ ತೋಟಕ್ಕೆ ಹೋಗುತ್ತಿದ್ದು, ತೋಟದ ಮಾಲೀಕರು ಮತ್ತು ಜನರ ನಡುವೆ ಪದೇ ಪದೇ ಇದೇ ವಿಚಾರವಾಗಿ ಗಲಾಟೆಯಾಗುತ್ತಿದೆಯೆಂತೆ. ಈ ಕುರಿತಾಗಿಯೂ ಕೌನ್ಸಿಲರ್ ಮತ್ತು ಪುರಸಭೆ ಅಧಿಕಾರಿಗಳಿಗೆ ಮನವಿರಿಕೆ ಮಾಡಿದರೂ ಕೂಡ ಪ್ರಯೋಜನವಿಲ್ಲ ಅಂತ ಆಕ್ರೋಶ ಹೊರಹಾಕಿದರು. ಈ ಬಗ್ಗೆ ತೋಟದ ಮಾಲೀಕರಿಗೆ ಕೇಳಿದರೆ ಸ್ವಾಮಿ ಈ ಮಾರುತಿ ನಗರದ ಜನರು ಬಿಡುತ್ತಿರುವ ಕೊಳಚೆ ನೀರಿನಿಂದಾಗಿ ನಾವು ಹಾಕಿರುವ ಅಡಿಕೆ, ತೆಂಗಿನ ಗಿಡಗಳು ಒಣಗಿ ಹೋಗುತ್ತಿವೆ. ನಮಗೆ ಆಗುವ ನಷ್ಟವನ್ನು ತುಂಬೋರು ಯಾರು ಅಂತ ಬೇಸರ ವ್ಯಕ್ತಪಡಿಸಿದರು.
ಅದೇನೇ ಇರಲಿ ಅಧಿಕಾರಿಗಳು ಇಂತಹ ಜ್ವಲಂತ ಸಮಸ್ಯೆ ಇರುವ ವಾರ್ಡ್ನ್ನು ನಿರ್ಲಕ್ಷಿಸುತ್ತಿರುವುದು ಏಕೆ ಅನ್ನೋ ಪ್ರಶ್ನೆ ಮಾಡುತ್ತದೆ. ಜೊತೆಗೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ವಾರ್ಡ್ನಲ್ಲಿ ವಾಸಿಸುವ ಜನರು ಮೂಲಭೂತ ಸೌಕರ್ಯವಿಲ್ಲದೆ ಪರದಾಡುತ್ತಿದ್ದಾರೆ. ಮುಂದಾದರೂ ಓಟು ಹಾಕಿಸಿಕೊಂಡು ಗೆದ್ದ ಕೌನ್ಸಿಲರ್ ಹಾಗೂ ಶಾಸಕರು, ಪುರಸಭೆ ಅಧಿಕಾರಿಗಳು ಇತ್ತ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕಿದೆ.