RAICHUR NEWS : ಬಾಲ್ಯದ ಗೆಳೆಯನನ್ನು ಜಮೀನಿಗೆ ಕರೆದುಕೊಂಡು ಹೋಗಿ ಕೊಡಲಿಯಿಂದ ಹೊಡೆದು ಅಮಾನುಷವಾಗಿ ಹತ್ಯೆ ಮಾಡಿರುವ ದಾರುಣ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಯರಗುಂಟಿ ಗ್ರಾಮದಲ್ಲಿ ನಡೆದಿದ್ದು, ಅಕ್ರಮ ಸಂಬಂಧದಿಂದ ಹುಟ್ಟಿದ ಶಂಕೆಯೇ ಈ ಕೊಲೆಗೆ ಕಾರಣವೆಂದು ಹೇಳಲಾಗಿದೆ. ಮೃತ ವ್ಯಕ್ತಿಯನ್ನು ಬಸನಗೌಡ ಎಂದು ಗುರುತಿಸಲಾಗಿದ್ದು, ಕೊಲೆ ಆರೋಪಿಯಲ್ಲಿ ಶರಣಬಸವ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಇಬ್ಬರೂ ಬಾಲ್ಯದಂದೇ ಸ್ನೇಹಿತರಾಗಿದ್ದರು.
ಇನ್ನು ಮಾಹಿತಿಯ ಪ್ರಕಾರ, ಬಸನಗೌಡ ಗ್ರಾಮದಲ್ಲಿನೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದನು. ಹಾಗೆಯೇ ಶರಣಬಸವನಿಗೂ ಸಹ ಇಂತಹ ಸಂಬಂಧ ಬೆಳೆಸುವಂತೆ ಬಲವಂತ ಮಾಡಿದ್ದ. ಶರಣಬಸವ ಮಹಿಳೆಯೊಂದಿಗೆ ಸಂಪರ್ಕದಲ್ಲಿದ್ದ ಬಳಿಕ ಗುಪ್ತ ರೋಗವೊಂದು ತಗಲಿದೆಯೆಂದು ಆರೋಪಿಸಿ, ಇದಕ್ಕೆ ತನ್ನ ಸ್ನೇಹಿತನೇ ಕಾರಣವೆಂದು ಶಂಕಿಸಿ ಕೊಲೆಕೃತ್ಯಕ್ಕೆ ಮುಂದಾಗಿದ್ದನು.
ಕೊಲೆ ದಿನದಂದು, ಶರಣಬಸವ “ಜಮೀನಿಗೆ ಕೆಲಸಕ್ಕೆ ಹೋಗೋಣ” ಎಂದು ನೆಪಮಾಡಿ ಗೆಳೆಯನನ್ನು ಜಮೀನಿಗೆ ಕರೆದುಕೊಂಡು ಹೋಗಿದ್ದನು. ಜಮೀನಿನಲ್ಲಿ ಸ್ನೇಹಿತನಿಗೆ ಮೂತ್ರ ವಿಸರ್ಜನೆ ವೇಳೆ, ಹಿಂದಿನಿಂದ ಕೊಡಲಿಯಿಂದ ತೀವ್ರವಾಗಿ ಹೊಡೆದು ಕೊಂದಿದ್ದಾನೆ ಎನ್ನಲಾಗಿದೆ.
ಇನ್ನು ಮೃತ ಬಸನಗೌಡನ ಮೃತದೇಹ ಜಮೀನಿನಲ್ಲಿ ಪತ್ತೆಯಾಗುತ್ತಿದ್ದಂತೆ ಗ್ರಾಮಸ್ಥರು ಲಿಂಗಸಗೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಶ್ವಾನದಳದ ನೆರವಿನಿಂದ ತನಿಖೆ ಮುಂದುವರೆಸಿದ್ದು, ಶ್ವಾನಗಳು ಕೊಲೆ ನಡೆದ ಸ್ಥಳದಿಂದ ಒಂದು ಕಿಲೋಮೀಟರ್ ದೂರವಿದ್ದ ಕೊಲೆ ಮಾಡಲು ಬಳಸಿದ ಕೊಡಲಿಯನ್ನು ಪತ್ತೆಹಚ್ಚಿವೆ. ನಂತರ ಶ್ವಾನಗಳು ನೇರವಾಗಿ ಶರಣಬಸವನ ಮನೆ ಮುಂದೆ ಬೊಗಳುತ್ತ ನಿಂತು ಶಂಕೆ ದೃಢಪಡಿಸಿವೆ. ಇನ್ನು ಈ ಕುರಿತಂತೆ ಲಿಂಗಸಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.