ರಾಮನಗರ : ರಾಮನಗರ ಜಿಲ್ಲೆಯ ಭದ್ರಾಪುರ ಹಕ್ಕಿಪಿಕ್ಕಿ ಕಾಲೋನಿಯಲ್ಲಿ 14 ವರ್ಷದ ದಿವ್ಯಾಂಗ ಬಾಲಕಿಯ ಸಾವು ರಾಜ್ಯದಾದ್ಯಂತ ಚರ್ಚೆಗೆ ಕಾರಣವಾಗಿದ್ದ ಘಟನೆಗೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮರ್ಡರ್ ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದರು. ಆದರೆ ಇದೀಗ ಮರ್ಡರ್ ಕೇಸ್ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅದೇನೆಂದರೆ ಅತ್ಯಾಚಾರ ನಡೆದಿಲ್ಲವೆಂಬುದು ಎಫ್ಎಸ್ಎಲ್ (FSL) ವರದಿಯಲ್ಲಿ ಧೃಡಪಟ್ಟಿದೆ. ಜೊತೆಗೆ ಪ್ರಕರಣದ ತನಿಖೆ ಬಗ್ಗೆ ಅಲೆಮಾರಿ ಹಕ್ಕಿಪಿಕ್ಕಿ ಬುಡುಕಟ್ಟು ಸಮುದಾಯದ ರಾಜ್ಯಾಧ್ಯಕ್ಷ ಜಗ್ಗು ಅನುಮಾನ ವ್ಯಕ್ತಪಡಿಸಿದ್ದಾರೆ.
ಇನ್ನು ಮೇ 11 ರಂದು ಖುಷಿ ಎಂಬ ಬಾಲಕಿ ನಾಪತ್ತೆಯಾಗಿದ್ದಳು. ಬಳಿಕ ಮೇ 12 ರಂದು ಅವಳ ಶವ ಹಕ್ಕಿಪಿಕ್ಕಿ ಕಾಲೋನಿಯ ಬಳಿ ಇರುವ ರೈಲ್ವೆ ಹಳಿ ಪಕ್ಕದಲ್ಲಿ ಪತ್ತೆಯಾಯಿತು. ಕುಟುಂಬಸ್ಥರು ಅತ್ಯಾಚಾರ ಮಾಡಿಕೊಂಡು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಪೋಲೀಸರು ಹಲವು ಆಯಾಮಗಳಲ್ಲಿ ತನಿಖೆ ನಡೆಸಿದ್ದು, ಮರಣೋತ್ತರ ಪರೀಕ್ಷೆ ಹಾಗೂ ಎಫ್ಎಸ್ಎಲ್ ವರದಿಗಾಗಿ ಮಾದರಿಗಳನ್ನು ಕಳುಹಿಸಲಾಗಿತ್ತು. ಇದೀಗ ಎಫ್ಎಸ್ಎಲ್ ವರದಿ ಬಂದಿದ್ದು, ಅತ್ಯಾಚಾರವಾಗಿಲ್ಲ, ಶರೀರದಲ್ಲಿ ಸುಟ್ಟ ಗುರುತುಗಳಿಲ್ಲ, ಎಂಬುದು ದೃಢವಾಗಿದೆ.ಇದಲ್ಲದೆ ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ ಬಾಲಕಿ ರೈಲು ಡಿಕ್ಕಿಗೆ ಒಳಗಾಗಿ ಸಾವನ್ನಪ್ಪಿರುವ ಸಾಧ್ಯತೆ ಹೆಚ್ಚು ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಮರಣೋತ್ತರ ವರದಿ ಸೋಮವಾರ ಪೊಲೀಸರು ಪಡೆದ ಬಳಿಕ, ಇದು ಆತ್ಮಹತ್ಯೆನಾ? ಇಲ್ಲವೇ ಕೊಲೆಯಾ? ಎಂಬ ಪ್ರಶ್ನೆಗೆ ಸ್ಪಷ್ಟತೆ ಬರಲಿದೆ. ಈ ಘಟನೆಯ ನಿಖರ ಸತ್ಯ ಏನು ಎಂಬುದನ್ನು ಬಹು ನಿರೀಕ್ಷೆಯ ಮರಣೋತ್ತರ ವರದಿ ಹೊರ ಬೀಳುವ ತನಕ ಕಾದು ನೋಡಬೇಕಿದೆ.