ಬೆಂಗಳೂರು : ಪಾಪಿ ಪಾಕಿಸ್ತಾನ ಭಾರತದ ಮೇಲೆ ಅಪ್ರಚೋದಿತ ದಾಳಿ ನಡೆಸಿದ್ದು, ಪಾಕ್ ದಾಳಿ ವಿರುದ್ಧ ಭಾರತ ಆಪರೇಷನ್ ಸಿಂಧೂರ ನಡೆಸುವ ಮೂಲಕ ಪಾಕಿಸ್ತಾನಕ್ಕೆ ತಕ್ಕ ಪಾಠವನ್ನು ಭಾರತ ಕಲಿಸಿತ್ತು. ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ ಸಕ್ಸಸ್ ಆಗಿದ್ದು, ಭಾರತೀಯರು ಸಂಭ್ರಮಿಸ್ತಾ ಇದ್ದಾರೆ. ಆಪರೇಷನ್ ಸಿಂಧೂರ ಸಕ್ಸಸ್ನನ್ನು ಬಿಜೆಪಿ ನಾಯಕರು ತಿರಂಗಾ ಯಾತ್ರೆ ನಡೆಸಿದ್ರೆ, ಇತ್ತ ಕಾಂಗ್ರೆಸ್ ನಾಯಕರು ಜೈ ಹಿಂದ್ ಕಾರ್ಯಕ್ರಮದ ಮೂಲಕ ಭಾರತೀಯ ಸೇನೆಗೆ ಶುಭಹಾರೈಸಿದರು.
ಬೆಂಗಳೂರಿನ ಟೌನ್ಹಾಲ್ ಸರ್ಕಲ್ನಲ್ಲಿ ಜೈ ಹಿಂದ್ ಕಾರ್ಯಕ್ರಮವನ್ನು ಕಾಂಗ್ರೆಸ್ ಸರ್ಕಾರ ಆಯೋಜನೆ ಮಾಡಿತ್ತು. ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೇಪಾಲ್, ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಸೇರಿ ಹಲವು ಸಚಿವರು, ಶಾಸಕರು ಹಾಗೂ ನೂರಾರು ಮಂದಿ ಕಾರ್ಯಕರ್ತರು ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಭಾರತೀಯ ಸೇನೆಗೆ ಗೌರವ ಸಲ್ಲಿಸಿದ್ದು, ಸಿದ್ದರಾಮಯ್ಯ, ಡಿಕೆಶಿ ಸೇರಿ ಕಾಂಗ್ರೆಸ್ ನಾಯಕರು ಆರ್ಮಿ ಜಾಕೆಟ್ ತೊಟ್ಟು ಬೀಗಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಸೇನೆಯಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇರುವುದನ್ನು ಪ್ರಸ್ತಾಪಿಸಿದ್ದು, ನೇಮಕಾತಿ ವಿಳಂಬದ ಕುರಿತು ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ಪ್ರಶ್ನಿಸಿದೆ. ಅಲ್ಲದೇ ಪಾಕಿಸ್ತಾನದೊಂದಿಗೆ ಕದನ ವಿರಾಮದ ಷರತ್ತುಗಳನ್ನು ಬಹಿರಂಗಪಡಿಸುವಂತೆ ಕಾಂಗ್ರೆಸ್ ಆಗ್ರಹ ಮಾಡಿದೆ. ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಆರ್ಮಿ ಕ್ಯಾಂಟೀನ್ಗಳಲ್ಲಿ ಮಾರಾಟ ಮಾಡುವ ಮದ್ಯದ ಮೇಲಿನ ಅಬಕಾರಿ ಸುಂಕ ವಿಧಿಸುವುದಿಲ್ಲ ಎಂದು ಘೋಷಿಸಿದರು. ಮಿಲಿಟರಿ ಕ್ಯಾಂಟೀನ್ಗಳಿಗೆ ರಾಜ್ಯ ಸರ್ಕಾರ ಎಕ್ಸೈಸ್ ಡ್ಯುಟಿ ವಿಧಿಸಲ್ಲ ಎಂದು ಸ್ಪಷ್ಟಪಡಿಸಿದ್ದು, ಸಿಎಂ ಘೋಷಣೆಗೆ ಮಾಜಿ ಸೈನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಜೈ ಹಿಂದ್ ಕಾರ್ಯಕ್ರಮದಲ್ಲಿ ಮಾಜಿ ಸೈನಿಕರಿಗೆ ಕಾಂಗ್ರೆಸ್ ನಾಯಕರು ಸನ್ಮಾನ ಮಾಡುವ ಮೂಲಕ ಗೌರವ ಸಮರ್ಪಣೆ ಮಾಡಿದ್ರು. ಕಾರ್ಯಕ್ರಮದಲ್ಲಿ ಜೈಹಿಂದ್ ಘೋಷಣೆ ಮೊಳಗಿದ್ದು ಕಾರ್ಯಕ್ರಮದಲ್ಲಿ ಇದ್ದವರಲ್ಲಿ ದೇಶಪ್ರೇಮವನ್ನು ಸಾರಿತು.