BANGALORE : ಬೆಂಗಳೂರು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿನ್ನೆ ಸಂಭವಿಸಿದ ಭೀಕರ ಕಾಲ್ತುಳಿತ ದುರಂತದಲ್ಲಿ 11 ಮಂದಿ ಆರ್ ಸಿಬಿ ಅಭಿಮಾನಿಗಳು ಪ್ರಾಣ ಕಳೆದುಕೊಂಡ ಘಟನೆಗೆ ಸಂಬಂಧಿಸಿದಂತೆ, ಕರ್ನಾಟಕ ಹೈಕೋರ್ಟ್ ಸ್ವಯಂಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ದಾಖಲಿಸಿಕೊಂಡಿದೆ.
ಇಂದು ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಅಲ್ಲದೆ, ವಿಚಾರಣೆಯನ್ನು ಮುಂದಿನ ಜೂನ್ 10 (ಮಂಗಳವಾರ)ಕ್ಕೆ ಮುಂದೂಡಿದೆ. ಅಲ್ಲದೇ ವಿಚಾರಣೆಯ ವೇಳೆ ಹೈಕೋರ್ಟ್ ರಾಜ್ಯ ಸರ್ಕಾರದ ವಿರುದ್ಧ ಹಲವು ತೀವ್ರ ಪ್ರಶ್ನೆಗಳ ಸುರಿಮಳೆಗೈದಿದೆ. “ಈಂತಹ ದೊಡ್ಡ ಮಾದರಿಯ ಕಾರ್ಯಕ್ರಮಕ್ಕೆ ನೀವು ಯಾವ ರೀತಿಯ ಮೆಡಿಕಲ್ ಸೌಲಭ್ಯಗಳನ್ನು ಒದಗಿಸಿದ್ದಿರಿ?” “ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದೀರಾ?” “ಎಲ್ಲಾ ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಮಾನ್ಯ ಎಸ್ಒಪಿ (SOP) ರೂಪಿಸಿದ್ದೀರಾ?” “ಇಂತಹ ಸಾರ್ವಜನಿಕ ಕಾರ್ಯಕ್ರಮಗಳನ್ನು ಆಯೋಜಿಸುವಾಗ ಕಡ್ಡಾಯವಾಗಿ ಪಾಲಿಸಬೇಕಾದ ನಿಯಮಗಳನ್ನು ನೀವು ಜಾರಿಗೆ ತಂದಿದ್ದೀರಾ?” ಎಂದು ಇನ್ನೂ ಹಲವು ಪ್ರಶ್ನೆಗಳನ್ನು ಉದ್ದೇಶಿಸಿ, ಸರ್ಕಾರದ ನಿಲುವನ್ನು ಸ್ಪಷ್ಟವಾಗಿ ನೀಡಬೇಕೆಂದು ಕೋರ್ಟ್ ಸೂಚಿಸಿದೆ.
ಈ ಘಟನೆ ಸಾರ್ವಜನಿಕ ಸುರಕ್ಷತೆ, ವೈದ್ಯಕೀಯ ತುರ್ತು ಸೇವೆಗಳ ಸಿದ್ಧತೆ ಹಾಗೂ ದೊಡ್ಡ ಜನಸಾಗರ ನಿರ್ವಹಣೆಯ ವೈಫಲ್ಯದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಹೈಕೋರ್ಟ್ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಒಟ್ಟು 21 ಗೇಟ್ಗಳಿವೆ. ಆದರೆ 3 ಅನ್ನು ಮಾತ್ರ ಓಪನ್ ಮಾಡಿದ್ದು ಯಾಕೆ ಎಂಬ ಪ್ರಶ್ನೆಗಳನ್ನು ಸಿಜೆ ಅವರು ಕೇಳಿದ್ದಾರೆ. ಕೊನೆಗೆ ಇದೆಲ್ಲಕ್ಕೂ ಸಮಗ್ರ ವರದಿ ಕೊಡಬೇಕು ಎಂದು ಅರ್ಜಿ ವಿಚಾರಣೆಯನ್ನು ಜೂನ್ 10ಕ್ಕೆ ಮುಂದೂಡಿಕೆ ಮಾಡಿದೆ.