SIRA : ಮಳೆಗೆ ಕಳಚಿ ಬೀಳುತ್ತಿದೆ ಅಂಗನವಾಡಿ ಮೇಲ್ಚಾವಣಿ

SIRA NEWS : ರಾಜ್ಯಾದ್ಯಂತ ಮತ್ತೆ ಭರ್ಜರಿ ಮಳೆಯಾಗುತ್ತೆ ಅಂತ ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿದೆ. ಇಂದಿನಿಂದ ಮಳೆ ಹೆಚ್ಚಾಗಿದೆ ಅಂತ ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಕೂಡ ಘೋಷಣೆ ಮಾಡಿದೆ. ಆದ್ರೆ ಇತ್ತೀಚೆಗೆ ದಿಢೀರನೇ ಶಿರಾದಲ್ಲಿ ಭರ್ಜರಿ ಮಳೆಯಾಯ್ತು. ಒಂದು ಕಡೆ ರೈತರು ಸಂತಸಗೊಂಡ್ರೆ, ಮತ್ತೊಂದು ಕಡೆ ತೊಗರುಗುಂಟೆ ಗ್ರಾಮದಲ್ಲಿ ಇರುವ ಅಂಗನವಾಡಿಯಲ್ಲಿ ಸ್ಥಿತಿ ಕೇಳೋರಿಲ್ಲ ಅನ್ನೋ ಆಗಿದೆ. ಇಲ್ಲಿ ಪುಟ್ಟ ಮಕ್ಕಳು ಚಾವಣೆ ಯಾವಾಗ ಕುಸಿಯುತ್ತೋ ಅನ್ನೋ ಜೀವಭಯದಲ್ಲಿ ಕುಳಿತುಕೊಳ್ಳುವಂತಾಗಿದೆ.

ಹೌದು, ಮೇಲ್ಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊಗರುಗುಂಟೆ ಗ್ರಾಮದಲ್ಲಿ ಇರುವ ಅಂಗನವಾಡಿ ಕೇಂದ್ರ ಹಲವು ವರ್ಷಗಳ ಹಿಂದೆಯೇ ಶಿಥಿಲಗೊಂಡಿತ್ತು. ಈ ಶಿಥಿಲಗೊಂಡ ಅಂಗನವಾಡಿ ಕೇಂದ್ರ ದುರಸ್ಥಿ ಕಾರ್ಯ ಮಾಡುವಂತೆ ಹಲವು ಬಾರಿ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿದ್ರು. ಆದ್ರೆ ಅಧಿಕಾರಿಗಳು ಇತ್ತ ಗಮನಕೂಡ ಹರಿಸುತ್ತಿಲ್ಲವಂತೆ. ಹೀಗಾಗಿ ಈ ಅಂಗನವಾಡಿ ಕೇಂದ್ರ ಪಾಳುಬಂಗಲೆಯಂತಾಗಿದೆ.

ಇನ್ನು ಅಂಗನವಾಡಿ ಕೇಂದ್ರ ಸಂಪೂರ್ಣ ಶಿಥಿಲಗೊಂಡಿದ್ದು, ಸದ್ಯ ಸುರಿಯುತ್ತಿರುವ ಮಳೆಗೆ ಸೋರುವ ಜತೆಗೆ ಸಿಮೆಂಟ್ ಪದರವು ಉದುರಿ ಬೀಳುತ್ತಿದ್ದು, ಮಕ್ಕಳ ತಲೆಮೇಲೆ ಬಿದ್ದರೆ ಯಾವುದೇ ಕ್ಷಣದಲ್ಲಿ ಬೇಕಾದರೂ ಮಕ್ಕಳ ಜೀವಕ್ಕೆ ಕುತ್ತು ತರಬಹುದು. ಮಳೆಯ ನೀರು ಅಂಗನವಾಡಿ ಕೇಂದ್ರದೊಳಕ್ಕೆ ಬರುತ್ತಿದ್ದು, ಸಹಾಯಕಿಯರು ನೀರು ಎತ್ತಿ ಹೊರಹಾಕುವ ದುಸ್ಥಿತಿ ಬಂದಿದೆ. ಈ ಅಂಗನವಾಡಿ ಕೇಂದ್ರದಲ್ಲಿ ಸುಮಾರು 16 ರಿಂದ 20ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಆದ್ರೆ, ಈ ಅಂಗನವಾಡಿ ಕೇಂದ್ರ ಇಂದಿಗೂ ಕೂಡ ರಿಪೇರಿ ಮಾಡದೇ ಹಾಗೇಯೇ ಬಿಟ್ಟಿದ್ದಾರೆ.

ಅಂಗನವಾಡಿ ಕೇಂದ್ರಕ್ಕೆ ಇದುವರೆಗೂ ಬರೀ ತಾತ್ಕಾಲಿಕ ರಿಪೇರಿ ಮಾಡುತ್ತಾ, ಬರೀ ಸುಣ್ಣ ಬಣ್ಣ ಬಳಿಯುತ್ತಿದ್ದು, ಕಗ್ಗತ್ತಲೆಯ ಶಿಶು ಕೇಂದ್ರವಾಗಿದೆ. ಅಂಗನವಾಡಿ ಕೇಂದ್ರಕ್ಕೆ ಬರುವ ಮಕ್ಕಳಿಗೆ ಇದೊಂದು ಜೈಲಿನ ಕತ್ತಲೆ ಕೋಣೆಯಂತೆ ಭಾಸವಾಗುತ್ತಿದೆ. ಮನೆಯಲ್ಲಿ ಆಟವಾಡಿಕೊಂಡು ಕಾಲಕಳೆಯುತ್ತಿದ್ದ ಮಕ್ಕಳನ್ನು ಪೋಷಕರು ಅಂಗನವಾಡಿ ಕೇಂದ್ರಕ್ಕೆ ತಂದು ಬಿಡುತ್ತಾರೆ.  ಆದರೆ ಇಲ್ಲಿನ ಮಕ್ಕಳಿಗೆ ವಿದ್ಯುತ್‌, ಶೌಚಾಲಯ, ಕುಡಿಯುವ ನೀರು ಸೇರಿ ಯಾವುದೇ ತರಹದ ಅನುಕೂಲಗಳು ಇಲ್ಲ.

ಇನ್ನು ಈ ಅಂಗನವಾಡಿ ಕೇಂದ್ರದಲ್ಲಿ ಅಡುಗೆ ಮಾಡಲು, ಮಕ್ಕಳಿಗಾಗಿ ಸರ್ಕಾರ ಕೊಡುವ ಸಾಮಗ್ರಿಗಳನ್ನು ಶೇಖರಿಸಿಕೊಳ್ಳಲು ಕೂಡ ಜಾಗವಿಲ್ಲ. ಆಹಾರ ಪದಾರ್ಥಗಳ ಮೇಲೆ ಮೇಲ್ಬಾಗದ ಚಾವಣೆಯ ಸಿಮೆಂಟ್‌, ಮಣ್ಣು ಕುಸಿದು ಬೀಳುತ್ತಿದ್ದು ತಿನ್ನುವ ಆಹಾರಕ್ಕೆ ಮಿಶ್ರಣವಾಗುತ್ತಿದೆ. ಇತ್ತ ಆಟದ ಮೈದಾನ ಕೂಡ ಆ ಮಕ್ಕಳಿಗಿಲ್ಲ. ಇಂತಹ ಸಮಸ್ಯೆಯ ಕುರಿತಾಗಿ ಶಿಶು ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದ್ರು ಅವರು ಕ್ಯಾರೆ ಎನ್ನುತ್ತಿಲ್ಲ ಅಂತ ಗ್ರಾಮಸ್ಥರು ಆಕ್ರೋಶ ಹೊರಹಾಕುತ್ತಿದ್ದಾರೆ.

 

Author:

...
Keerthana J

Copy Editor

prajashakthi tv

share
No Reviews