
Shardul Thakur : ಮುಂಬರುವ ರಣಜಿ ಟ್ರೋಫಿ ಋತುವಿಗೆ ಮುಂಬೈ ಕ್ರಿಕೆಟ್ ತಂಡದ ನಾಯಕನಾಗಿ ಭಾರತೀಯ ವೇಗದ ಬೌಲರ್ ಶಾರ್ದೂಲ್ ಠಾಕೂರ್ ಅವರನ್ನು ಅಧಿಕೃತವಾಗಿ ನೇಮಕ ಮಾಡಲಾಗಿದೆ. ಈ ನಿರ್ಧಾರವನ್ನು ಮುಂಬೈ ಕ್ರಿಕೆಟ್ ಸಂಸ್ಥೆಯ (MCA) ಹಿರಿಯ ಆಯ್ಕೆ ಸಮಿತಿಯು ಸಂಜಯ್ ಪಾಟೀಲ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಏಕಮತದಿಂದ ಕೈಗೊಂಡಿದೆ.
ಇದೇ ವೇಳೆ, ಕಳೆದ ಎರಡು ಋತುಗಳಲ್ಲಿ ಮುಂಬೈ ತಂಡವನ್ನು ಮುನ್ನಡೆಸಿದ ಅಜಿಂಕ್ಯ ರಹಾನೆ, ನಾಯಕ ತ್ವದಿಂದ ಹಿಂದೆ ಸರಿಯಲು ತೀರ್ಮಾನಿಸಿದ್ದಾಗಲೇ ಶಾರ್ದೂಲ್ ನೇಮಕದ ನಿರೀಕ್ಷೆ ಮೂಡಿತ್ತು. ಇನ್ನು ಸಂಜಯ್ ಪಾಟೀಲ್ ಈ ಕುರಿತು ಮಾತನಾಡಿದ್ದು “ಮೈದಾನದಲ್ಲಿಯೂ ಹೊರಗೂ ಶಾರ್ದೂಲ್ ಅವರು ತಮ್ಮ ನಾಯಕತ್ವ ಗುಣಗಳನ್ನು ನಿರೂಪಿಸಿದ್ದಾರೆ. ಅವರ ನೇತೃತ್ವದಲ್ಲಿ ತಂಡ ಶ್ರೇಷ್ಠ ಪ್ರದರ್ಶನ ನೀಡಲಿದೆ ಎಂಬ ವಿಶ್ವಾಸ ನಮ್ಮದು,“ಎಂದು ಹೇಳಿದರು.
ಶಾರ್ದೂಲ್ ಠಾಕೂರ್, ಮೂರು ಬಾರಿ ರಣಜಿ ಟ್ರೋಫಿ ಚಾಂಪಿಯನ್ ಆಗಿರುವ ಅನುಭವಿ ಆಟಗಾರ, ಇತ್ತೀಚೆಗಿನ ದುಲೀಪ್ ಟ್ರೋಫಿ ಸೆಮಿಫೈನಲ್ನಲ್ಲಿ ಪಶ್ಚಿಮ ವಲಯ ತಂಡದ ನಾಯಕರಾಗಿ ಕಾರ್ಯ ನಿರ್ವಹಿಸಿದ್ದರು.
ಮುಂಬೈ ತಂಡ ಈ ಬಾರಿ ತಮ್ಮ 42ನೇ ರಣಜಿ ಟ್ರೋಫಿ ಕಿರೀಟದ ಬೆನ್ನಟ್ಟಿನಲ್ಲಿ ಸಜ್ಜಾಗುತ್ತಿದೆ. ಶಾರ್ದೂಲ್ ನೇತೃತ್ವದಲ್ಲಿ ಹೊಸ ತಲೆಮಾರಿಗೆ ಅವಕಾಶ, ಅನುಭವ ಮತ್ತು ತಾಕತ್ತು ಮಿಶ್ರಿತ ತಂಡ ರೂಪಗೊಳ್ಳುವ ನಿರೀಕ್ಷೆಯಿದೆ.




