ಚಿಕ್ಕಮಗಳೂರು : ಚಾರ್ಮಾಡಿ ಘಾಟಿಯಲ್ಲಿ ಮುಂದುವರೆದ ಗಾಳಿ ಮಳೆಯಿಂದಾಗಿ ಮತ್ತೊಮ್ಮೆ ಅಪಾಯದ ಸನ್ನಿವೇಶ ಉಂಟಾಗಿದೆ. ಪ್ರವಾಸಿಗರ ಕಾರೊಂದು ಚಾರ್ಮಾಡಿ ಘಾಟಿಯ ಅಣ್ಣಪ್ಪ ಸ್ವಾಮಿ ದೇಗುಲದ ಬಳಿ ಕಾರು ಪಾಸ್ ಆಗುತ್ತಿದ್ದ ಸಂದರ್ಭದಲ್ಲಿ, ದೊಡ್ಡ ಮರದ ರೆಂಬೆ ಮುರಿದು ರಸ್ತೆಗೆ ಬಿದ್ದ ಘಟನೆ ಆತಂಕಕ್ಕೆ ಕಾರಣವಾಗಿದೆ.
ಧರ್ಮಸ್ಥಳದಿಂದ ಬರುತ್ತಿದ್ದ ಪ್ರವಾಸಿಗರ ಕಾರು ಕೇವಲ ಸೆಕೆಂಡುಗಳ ಅಂತರದಲ್ಲಿ ಈ ಅಪಾಯದಿಂದ ಪಾರಾಗಿದ್ದು, ಕೂದಲೆಳೆ ಅಂತರದಲ್ಲಿ ಅಪಾಯ ತಪ್ಪಿದಂತೆ ಘಟ್ಟದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ರೆಂಬೆ ಕಾರಿನ ಮೇಲೆ ಬಿದ್ದಿದ್ದರೆ ಗಂಭೀರ ಅನಾಹುತ ಸಂಭವಿಸುವ ಸಾಧ್ಯತೆ ಇದ್ದು, ಇದು ಪ್ರವಾಸಿಗರ ಪಾಲಿಗೆ ಜೀವ ರಕ್ಷಣೆಯಾಗಿ ಪರಿಣಮಿಸಿದೆ.
ಇನ್ನು ಘಟನೆಯ ಬಳಿಕ ಕೊಟ್ಟಿಗೆಹಾರದ ಸ್ಥಳೀಯ ಯುವಕರು ಹಾಗೂ ಬಣಕಲ್ ಪೊಲೀಸ್ ಠಾಣೆಯ ಸಿಬ್ಬಂದಿ ಚುರುಕಿನಿಂದ ಕಾರ್ಯನಿರ್ವಹಿಸಿ ರಸ್ತೆಗೆ ಬಿದ್ದ ಮರದ ರೆಂಬೆಯನ್ನು ತೆರವುಗೊಳಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿದ್ದಾರೆ.