TUMAKURU NEWS : ಬೆಂಗಳೂರಿನಿಂದ ತುಮಕೂರಿಗೆ ಬರುವ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ 5 ಕೋಟಿ ರೂಪಾಯಿ ವೆಚ್ಚದಲ್ಲಿ ಬೃಹತ್ ಸ್ವಾಗತ ಕಮಾನು ನಿರ್ಮಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಇದಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅನುಮತಿ ಸಿಗದ ಕಾರಣ ಇಂದು ಗೃಹ ಮತ್ತು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಅವರು ಕೇಂದ್ರ ಸಚಿವ ವಿ.ಸೋಮಣ್ಣ ಅವರ ಮನೆಗೆ ಬೇಟಿ ನೀಡಿ ಮಾತುಕತೆ ನಡೆಸಿದ್ದಾರೆ.
ತುಮಕೂರು ನಗರ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿಯೇ ಇರೋದ್ರಿಂದ ಪ್ರಯಾಣದ ವೇಳೆ ತುಮಕೂರು ಪಾಸ್ ಆಗಿದ್ದೇ ಗೊತ್ತಾಗುವುದಿಲ್ಲ. ಕಣ್ಮುಚ್ಚಿ ಕಣ್ಣು ಬಿಡೋದ್ರೊಳಗೆ ತುಮಕೂರು ಪಾಸ್ ಆಗಿರುತ್ತೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದು ಬೃಹತ್ ಸ್ವಾಗತ ಕಮಾನು ನಿರ್ಮಿಸಿದ್ರೆ ಎಲ್ಲರಿಗೂ ಗೊತ್ತಾಗುತ್ತೆ ಅನ್ನೋ ಕಾರಣದಿಂದ ಸಚಿವ ಪರಮೇಶ್ವರ್ ಅವರು ಇದಕ್ಕೆ ವಿಶೇಷ ಆಸಕ್ತಿಯನ್ನ ತೋರಿಸುತ್ತಿದ್ದಾರೆ. ಇದಕ್ಕಾಗಿ ಸ್ಮಾರ್ಟ್ ಸಿಟಿ ವತಿಯಿಂದ 5 ಕೋಟಿ ರೂಪಾಯಿ ಹಣವನ್ನ ಕೂಡ ಒದಗಿಸಿಕೊಂಡಿದ್ದಾರೆ. ಆದ್ರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸ್ಥಳೀಯ ನಿರ್ದೇಶಕರು ಈ ಸ್ವಾಗತ ಕಮಾನು ನಿರ್ಮಾಣಕ್ಕೆ ಅನುಮತಿ ನೀಡಿರಲಿಲ್ಲ. ಹೀಗಾಗಿಕೇಂದ್ರ ಸಚಿವ ಸೋಮಣ್ಣ ಅವರ ನಿವಾಸಕ್ಕೆ ಬೇಟಿ ನೀಡಿ, ಅವರ ಮೂಲಕ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತೀನ್ ಗಡ್ಕರಿಯವರಿಗೆ ಮನವಿ ಕಳುಹಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸಚಿವ ಪರಮೇಶ್ವರ್, ತುಮಕೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ವಾಗತ ಕಮಾನು ನಿರ್ಮಿಸಲು ಸ್ಮಾರ್ಟ್ ಸಿಟಿಯಿಂದ 5 ಕೋಟಿ ರೂ. ಒದಗಿಸಿಕೊಂಡಿದ್ದೇವೆ. ರಾಷ್ಟ್ರೀಯ ಹೆದ್ದಾರಿಯ ಸ್ಥಳೀಯ ನಿರ್ದೇಶಕರು ಆಗುವುದಿಲ್ಲ ಎಂದು ನಮಗೆ ತಿಳಿಸಿದ್ದರು. ಇದಕ್ಕೆ ಕೇಂದ್ರ ಸರ್ಕಾರದ ಅನುಮತಿಯಾಗಬೇಕಿದೆ. ಕೇಂದ್ರದ ಸಚಿವರಾದ ವಿ.ಸೋಮಣ್ಣ ಅವರು ನಮ್ಮ ಜಿಲ್ಲೆಯ ಸಂಸದರು. ಹೀಗಾಗಿ ಸೋಮಣ್ಣ ಅವರ ಮೂಲಕ ಕೇಂದ್ರದ ಹೆದ್ದಾರಿ ಸಚಿವರಾದ ನಿತೀನ್ ಗಡ್ಕರಿ ಅವರಿಗೆ ಮನವಿ ನೀಡಿ, ಅನುಮತಿಯನ್ನು ಕೊಡಿಸುವಂತೆ ಕೇಳಿದ್ದೇನೆ. ಅನುಮತಿ ಕೊಟ್ಟರೆ ತುಮಕೂರಿನ ಆರಂಭದಲ್ಲಿ ಸ್ವಾಗತ ಕಮಾನು ನಿರ್ಮಿಸುತ್ತೇವೆ ಎಂದರು.
ಇನ್ನು ತುಮಕೂರು ಮೆಟ್ರೋ ಬಗ್ಗೆಯೂ ಮಾತನಾಡಿರುವ ಪರಮೇಶ್ವರ್, ತುಮಕೂರಿಗೆ ಮೆಟ್ರೋ ಯೋಜನೆ ತರುವ ಬಗ್ಗೆ ರಾಜ್ಯ ಸರ್ಕಾರದ ತೀರ್ಮಾನಗಳು ಏನಾಗುತ್ತದೆ ಎಂಬುದನ್ನು ನೋಡಿ ಸಚಿವ ವಿ.ಸೋಮಣ್ಣ ಬಳಿ ಮಾತನಾಡುತ್ತೇನೆ. ತುಮಕೂರಿಗೆ ಮೆಟ್ರೋ ಅಗತ್ಯ ಇದೆ ಎಂದು ಸೋಮಣ್ಣ ಅವರು ಹೇಳಿದ್ದಾರೆ. ಸಬ್ ಅರ್ಬನ್ ಯೋಜನೆಯೂ ಆಗಲಿ, ಮೆಟ್ರೋ ಕೂಡ ಬರಲಿ. ಎರಡು ಯೋಜನೆಗಳು ಆದರೆ ತಪ್ಪಿಲ್ಲ ಎಂದಿದ್ದಾರೆ. ತುಮಕೂರು ಅತಿ ವೇಗವಾಗಿ ಬೆಳೆಯುತ್ತಿದೆ. 20 ಸಾವಿರ ಎಕರೆಯಲ್ಲಿ ಇಂಡಸ್ಟ್ರೀಯಲ್ ಹಬ್ ಮಾಡಿದ್ದೇವೆ. ಬಹಳ ಜನ ತುಮಕೂರನ್ನು ವಿಸ್ತರಣೆ ಮಾಡಬೇಕು ಎಂದು ಕೇಳುತ್ತಿದ್ದಾರೆ. ಈ ಬಗ್ಗೆ ಅಧ್ಯಯನ ನಡೆಯುತ್ತಿದೆ. ಬೆಂಗಳೂರಿಗೆ ತುಮಕೂರು 70 ಕಿ.ಮೀ.ನಲ್ಲಿದೆ. ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಸೇರಿಸಿಕೊಂಡರೆ ಅಭಿವೃದ್ಧಿ ದೃಷ್ಟಿಯಿಂದ ಅನುಕೂಲವಾಗುತ್ತದೆ. ನಾವು ಕೂಡ ಪ್ರಸ್ತಾವನೆ ಸಲ್ಲಿಸುತ್ತೇವೆ ಎಂದರು.
ಅದೇನೇ ಇರಲಿ…ತುಮಕೂರಿನ ರಾಷ್ಟ್ರೀಯ ಹೆದ್ದಾರಿ ಬಳಿ ಸ್ವಾಗತ ಕಮಾನು ನಿರ್ಮಿಸಲು ಪರಮೇಶ್ವರ್ ಪಣ ತೊಟ್ಟಿದ್ದು, ಇದೀಗ ಕೇಂದ್ರ ಸಚಿವರಿಗೆ ಮನವಿಯನ್ನೂ ಸಲ್ಲಿಸಿದ್ದಾರೆ. ಇಲಾಖೆಯಿಂದ ಅನುಮತಿ ಸಿಕ್ಕಿದ್ರೆ ಕಾಮಗಾರಿ ಆರಂಭವಾಗಲಿದೆ.