ತುಮಕೂರು : ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ವರುಣಾರ್ಭಟ| ಸಾರ್ವಜನಿಕರು,ವಿದ್ಯಾರ್ಥಿಗಳ ಪರದಾಟ

ತುಮಕೂರು : ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನಲೆ ಮೇ ಅಂತ್ಯದವರೆಗೆ ಕರ್ನಾಟಕದಲ್ಲಿ ಭರ್ಜರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಆ ಕಾರಣಕ್ಕೆ ಸದ್ಯ 6 ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಕೂಡ ಘೋಷಿಸಲಾಗಿದೆ. ಇತ್ತ ತುಮಕೂರಿನಲ್ಲಿಯೂ ಮಳೆರಾಯನ ಅಬ್ಬರ ಜೋರಾಗಿದ್ದು, ಇಂದು ಬೆಳಿಗ್ಗೆಯಿಂದಲೇ ತುಮಕೂರಿಗೆ ವರುಣನ ಕಾಟ ಶುರುವಾಗಿದೆ. ಬೆಳಗ್ಗೆ ತುಂತುರು ಹನಿಗಳಿಂದ ಪ್ರಾರಂಭವಾಗದ ಮಳೆಯ ಆರ್ಭಟ 10 ಗಂಟೆಯ ಬಳಿಕ ಹೆಚ್ಚಾಗ್ತಲೇ ಹೋಗ್ತಿದೆ. ಹೀಗಾಗಿ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ದೈನಂದಿನ ಕೆಲಸಗಳಿಗೆ ತೆರಳುವ ಸಾರ್ವಜನಿಕರು ಪರದಾಡುವಂತಾಗಿದೆ.

ಬಿಟ್ಟುಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ತುಮಕೂರು ನಗರ ಮಲೆನಾಡಿನಂತಾಗಿ ಬದಲಾಗಿದೆ. ಬೆಳಿಗ್ಗೆಯಿಂದ ಆರಂಭವಾದ ಮಳೆ ನಿರಂತರವಾಗಿ ಸುರಿಯುತ್ತಲೇ ಇದೆ. ಹೀಗಾಗಿ ವಿದ್ಯಾರ್ಥಿಗಳು ಮಳೆಯಲ್ಲಿ ನೆನೆದುಕೊಂಡೇ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತ ಮಳೆರಾಯನ ಕಿರಿಕಿರಿಯಿಂದಾಗಿ ದ್ವಿಚಕ್ರ ವಾಹನ ಸವಾರರು ಕೂಡ ಹೈರಾಣಾಗಿದ್ದು, ಮಳೆಯಲ್ಲಿ ಹೋಗೋದಕ್ಕೂ ಆಗದೇ, ನಿಲ್ಲೋದಕ್ಕೂ ಆಗದೇ ತೊಂದರೆ ಅನುಭವಿಸುವಂತಾಯಿತು.

ಇನ್ನು ಕುಣಿಗಲ್‌ ರಸ್ತೆ ಅಂಡರ್‌ ಪಾಸ್‌ ದುರಸ್ಥಿ ಕಾಮಗಾರಿ ನಡೆಯುತ್ತಿರುವ ಕಾರಣ ಮಾರ್ಗ ಬದಲಾವಣೆ ಮಾಡಲಾಗಿದ್ದು, ಸದ್ಯ ರಿಂಗ್‌ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದೆ. ಇತ್ತ ಮಳೆ ಬಂದ ಕಾರಣ ರಿಂಗ್‌ ರೋಡ್‌ ನಲ್ಲಿರುವ ಅಂಡರ್‌ ಪಾಸ್‌ ಬಳಿ ಟ್ರಾಫಿಕ್‌ ಜಾಮ್‌ ಉಂಟಾಗಿದ್ದು, ಟ್ರಾಪಿಕ್‌ ನಿಂದಾಗಿ ವಾಹನ ಸವಾರರು ಕಿರಿಕಿರಿ ಅನುಭವಿಸಿದ್ರು.

 

Author:

...
Keerthana J

Copy Editor

prajashakthi tv

share
No Reviews