BANGALORE : ಇಂದು ಬೆಂಗಳೂರಿನ ಕುಮಾರ ಕೃಪಾ ಸಭಾಂಗಣದಲ್ಲಿ ನಡೆದ ರೈಲ್ವೆ ಇಲಾಖೆಯ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನಾ ಸಭೆಯಲ್ಲಿ, ಬೆಂಗಳೂರು ಹಾಗೂ ಸುತ್ತಮುತ್ತಲಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಬೆಂಗಳೂರು ಹೊರ ವೃತ್ತಾಕಾರ ರೈಲ್ವೆ ಯೋಜನೆ (Bangalore Circular Railway Project)ಗೆ ಅಗತ್ಯವಿರುವ ಜಾಗ ಹಾಗೂ ಯೋಜನಾ ಪ್ರಗತಿಯ ಕುರಿತು ಚರ್ಚೆ ನಡೆಸಲಾಯಿತು.
ಈ ಸಭೆಯಲ್ಲಿ ಕೇಂದ್ರ ರೈಲ್ವೆ ಖಾತೆ ಸಚಿವ ವಿ ಸೋಮಣ್ಣ ಸೇರಿದಂತೆ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದು, ಯೋಜನೆಯ ತಾಂತ್ರಿಕ ವಿವರಗಳು ಮತ್ತು ಜಾಗ ಒದಗಿಸುವ ಪ್ರಕ್ರಿಯೆ ಕುರಿತು ವರದಿ ನೀಡಿದರು. ಈ ವೇಳೆ ಅಧಿಕಾರಿಗಳು ಯೋಜನೆಯ ಮೊದಲ ಹಂತದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 8 ಪ್ರಮುಖ ಪಟ್ಟಣಗಳನ್ನು ರೈಲ್ವೆ ಸಂಪರ್ಕಕ್ಕೆ ತರಲು ಸುಮಾರು 2500 ಎಕರೆ ಭೂಮಿ ಬೇಕಾಗುತ್ತದೆ ಎಂದು ತಿಳಿಸಿದರು. ಇನ್ನು ಇದಕ್ಕೆ ರೈಲ್ವೆ ಇಲಾಖೆಯೇ ಸಂಪೂರ್ಣ ಹಣ ಕೊಡುತ್ತದೆ ಎಂದು ರೈಲ್ವೆ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದರು.
ಯೋಜನೆಯು ನಗರ ಸಾರಿಗೆ ದಟ್ಟಣೆಗೆ ಸುಧಾರಣೆಯಾಗುವಂತೆ ರೂಪುಗೊಳ್ಳುತ್ತಿದ್ದರೊಂದಿಗೆ, ಹೊರವಲಯದಲ್ಲಿ ವಾಸಿಸುವ ಜನರಿಗೆ ವೇಗವಾದ ಸಂಪರ್ಕ ಸೌಲಭ್ಯವನ್ನು ಒದಗಿಸಲಿದೆ. ಅಭಿವೃದ್ಧಿ ಸಂಕೇತವಾಗಿರುವ ಕಾರಣ, ಭೂಮಿ ಗುರುತಿಸುವ ಪ್ರಕ್ರಿಯೆ ತ್ವರಿತಗೊಳ್ಳಬೇಕೆಂಬ ಒತ್ತಾಯ ಸಭೆಯಲ್ಲಿ ವ್ಯಕ್ತವಾಯಿತು. ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರು ಹೊರ ವರ್ತುಲ ರೈಲ್ವೆಗೆ ಸಬ್ ಅರ್ಬನ್ ರೈಲು ಹೇಗೆ ಜೋಡಣೆ ಮಾಡಬೇಕು ಎನ್ನುವ ಬಗ್ಗೆ ಸಭೆಯಾಗಿದೆ ಎಂದರು.
ಭದ್ರತಾ, ಪರಿಸರ ಹಾಗೂ ತಾಂತ್ರಿಕ ಅಂಶಗಳ ಪರಿಶೀಲನೆಯ ಬಳಿಕ, ಮುಂದಿನ ಹಂತದ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮಹತ್ವಾಕಾಂಕ್ಷಿ ಯೋಜನೆ ಪೂರ್ಣಗೊಂಡರೆ, ಬೆಂಗಳೂರು ನಗರ ಸಾರಿಗೆ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಯು ಸಂಭವಿಸಲಿದೆ.