YADAGIRI NEWS : ಸಾಲದ ಬಾಧೆ ತಾಳಲಾರದೆ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಜಾಲಿಬೆಂಚಿ ಗ್ರಾಮದಲ್ಲಿ ನಡೆದಿದೆ. ಈ ಗ್ರಾಮಕ್ಕೆ ಸೇರಿದ ಅಂಬ್ರೇಶ (44) ಎಂಬ ರೈತ 10 ಲಕ್ಷದಷ್ಟು ಸಾಲದ ಬಾಧೆ ತಾಳಲಾರದೇ ಆತ್ಮಹತ್ಯೆಗೆ ಶರಣಾಗಿರುವುದು ತಿಳಿದು ಬಂದಿದೆ.
ಅಂಬ್ರೇಶ ಅವರಿಗೆ ಕೇವಲ ಒಂದು ಎಕರೆ ಜಮೀನಿದ್ದು, ದೊರೆಯದ ಮಳೆ ಹಾಗೂ ಖರ್ಚು ಹೆಚ್ಚಾದ ಕಾರಣ ಬೆಳೆ ನಷ್ಟ ಅನುಭವಿಸಿದ್ದರು. ತಾಯಿ–ತಂದೆಯ ವೈದ್ಯಕೀಯ ಚಿಕಿತ್ಸಾ ಖರ್ಚುಗಳು ಕೂಡ ಹೆಚ್ಚಾಗಿದ್ದರಿಂದ ಬ್ಯಾಂಕ್ ಹಾಗೂ ಖಾಸಗಿಯವರ ಬಳಿ ಕೈಸಾಲ ಪಡೆದುಕೊಂಡಿದ್ದ ಅವರು, ಆರ್ಥಿಕ ಒತ್ತಡದ ನಡುವೆ ನರಳುತ್ತಿದ್ದರು. ಈ ಮಧ್ಯೆ ನೆನ್ನೆ ಅವರು ವಿಷ ಸೇವಿಸಿದ್ದು, ಗಂಭೀರ ಸ್ಥಿತಿಯಲ್ಲಿ ಅವರನ್ನು ಸುರಪುರ ತಾಲೂಕು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಮಾರ್ಗಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ.
ಇನ್ನು ಸ್ಥಳಕ್ಕೆ ತಕ್ಷಣವೇ ಸುರಪುರ ಪೊಲೀಸ್ ಠಾಣೆಯ ಪಿಎಐ ಉಮೇಶ್ ನಾಯಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಂಬಂಧಪಟ್ಟ ಪ್ರಕರಣ ದಾಖಲಿಸಲಾಗಿದೆ. ಇನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಮುಂದಾಗಿದ್ದಾರೆ.