ಉಡುಪಿ:
ಉಡುಪಿ ನಗರದ ಚಂದು ಮೈದಾನದ ಮಿಷನ್ ಕಾಂಪೌಂಡ್ ಬಳಿ ಇರುವ ಡಿಎಆರ್ ಪೊಲೀಸ್ ವಸತಿ ಗೃಹದಲ್ಲಿ ಇಂದು ಬೆಳಿಗ್ಗೆ ನಸುಕಿನ ವೇಳೆ ಕಳ್ಳರು ನುಗ್ಗಿ ಕೆಲವು ವಸ್ತುಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ.
ಡಿಎಆರ್ ಪೊಲೀಸ್ ವಸತಿ ಗೃಹದಲ್ಲಿ ಒಟ್ಟು 28 ಮನೆಗಳಿದ್ದು, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿಯಾದ ರಾಘವೇಂದ್ರ ಮತ್ತು ರವಿರಾಜ್ ಎಂಬುವವರ ಮನೆ ಬೀಗ ಮುರಿದು ಒಳನುಗ್ಗಿರುವ ಕಳ್ಳರು ಕಪಾಟಿನ ಬೀಗ ತೆರೆದು ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ಎಸೆದಿದ್ದಾರೆ, ರಾಘವೇಂದ್ರ ಅವರ ಮನೆಯಲ್ಲಿದ್ದ ಬೆಳ್ಳಿಯ ಕಾಲುಗೆಜ್ಜೆ ಹಾಗೂ ಚಿಲ್ಲರೆ ಹಣವನ್ನು ಕಳವು ಮಾಡಿದ್ದಾರೆ. ರವಿರಾಜ್ ಮನೆಯಲ್ಲಿ ಯಾವುದೇ ವಸ್ತುಗಳು ಕಳ್ಳತನವಾಗಿಲ್ಲ ಎಂದು ತಿಳಿದುಬಂದಿದೆ.
ರಾಘವೇಂದ್ರ ಕಳೆದ ಎರಡು ತಿಂಗಳಿನಿಂದ ಬೆಂಗಳೂರಿನಲ್ಲಿ ತರಬೇತಿಯಲ್ಲಿದ್ದು, ಮನೆಯಲ್ಲಿ ಯಾರು ಇರಲಿಲ್ಲ, ಅದೇ ರೀತಿ ರವಿರಾಜ್ ನೆನ್ನೆ ತಡರಾತ್ರಿ ಮನೆಗೆ ಬೀಗ ಹಾಕಿ ಕರ್ತವ್ಯಕ್ಕೆ ತೆರಳಿದ್ದ ವೇಳೆ ಈ ಕೃತ್ಯ ನಡೆದಿದೆ, ಇನ್ನು ಘಟನಾ ಸ್ಥಳಕ್ಕೆ ಉಡುಪಿ ನಗರ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ, ಪರಿಶೀಲಿಸಿದ್ದಾರೆ.