ತುಮಕೂರು:
ತುಮಕೂರು ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ವೀಲ್ಹಿಂಗ್ ಪುಂಡರ ಹಾವಳಿ ಮಿತಿ ಮೀರಿದ್ದು, ಇಂದು ಪಾದಚಾರಿಯೊಬ್ಬರನ್ನು ಬಲಿ ಪಡೆದಿದೆ. ತುಮಕೂರು ನಗರದ ಟೂಡಾ ಕಚೇರಿ ಬಳಿ ವೀಲ್ಹಿಂಗ್ ಮಾಡ್ತಾ ಬಂದ ಒಂದು ಬೈಕ್ ವ್ಯಕ್ತಿಯೋರ್ವನಿಗೆ ಗುದ್ದಿದೆ. ಗುದ್ದಿದ ರಭಸಕ್ಕೆ ಪಾದಚಾರಿ ತಲೆ ಹಾಗೂ ಕಾಲಿಗೆ ತೀವ್ರ ಪೆಟ್ಟಾಗಿದ್ದು ರಕ್ತಸ್ರಾವವಾಗಿತ್ತು. ಕೂಡಲೇ ಅವರನ್ನು ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಉಸಿರು ನಿಲ್ಲಿಸಿದ್ದಾರೆ. ನಗರದ ಸತ್ಯಮಂಗಲದಲ್ಲಿರುವ ಹೇಮಾದ್ರಿ ವಿದ್ಯಾಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ವಿ.ಟಿ.ತಿಪ್ಪೇಸ್ವಾಮಿ ಎಂಬುವವರು ವೀಲ್ಹಿಂಗ್ ಪುಂಡರ ಅಟ್ಟಹಾಸಕ್ಕೆ ಬಲಿಯಾದವರಾಗಿದ್ದಾರೆ.
ಟೂಡಾ ಕಚೇರಿ ಬಳಿ ಬೆಳಗ್ಗೆ ಹಾಲು ತರಲೆಂದು ತಿಪ್ಪೇಸ್ವಾಮಿ ಮನೆಯಿಂದ ಹೊರಗೆ ಬಂದಿದ್ದರು. ರಸ್ತೆ ದಾಟುತ್ತಿದ್ದ ವೇಳೆ ವೀಲ್ಹಿಂಗ್ ಮಾಡ್ತ ಬಂದ ಪುಂಡನೋರ್ವ ತಿಪ್ಪೇಸ್ವಾಮಿ ಗುದ್ದಿದ್ದಾನೆ. ಡಿಕ್ಕಿ ಹೊಡೆದ ರಭಸಕ್ಕೆ ತಿಪ್ಪೇಸ್ವಾಮಿ ತಲೆ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿತ್ತು. ಕೂಡಲೇ ಅಲ್ಲಿದ್ದ ಸ್ಥಳೀಯರು ಅವರನ್ನು ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದುರಾದುಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಿಸಿ ಕ್ಯಾಮೆರಾ ದೃಶ್ಯಗಳನ್ನು ಆಧರಿಸಿ ವಿಲ್ಹೀಂಗ್ ಪುಂಡರಿಗಾಗಿ ಬಲೆ ಬೀಸಿದ್ದಾರೆ. ದಿನೇ ದಿನೆ ನಗರದಲ್ಲಿ ವೀಲ್ಹಿಂಗ್ ಪುಂಡರ ಹಾವಳಿ ಮಿತಿಮೀರಿದ್ದು ಕೂಡಲೇ ಪೊಲೀಸರು ವೀಲ್ಹಿಂಗ್ಗೆ ಬ್ರೇಕ್ ಹಾಕಬೇಕಿದೆ. ಇಲ್ಲವಾದರೆ ಮತ್ತಷ್ಟು ಮಂದಿಯನ್ನು ಬಲಿಪಡೆಯುವಂದಂತೂ ಸತ್ಯ.