ತುಮಕೂರು:
ತುಮಕೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಒಂದಾದ ಸಿದ್ಧಾರ್ಥ ಪಿಯು ವಸತಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ದೀಪಿಕಾ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. PCMC ಓದುತ್ತಿದ್ದ ವಿದ್ಯಾರ್ಥಿನಿ ದೀಪಿಕಾ ಮೂಲತಃ ಶಿರಾ ತಾಲೂಕಿನ ಕುಂಟೆಗೌಡನಪಾಳ್ಯ ದವರಾಗಿದ್ದು, ಸಿದ್ದಾರ್ಥ ಪಿಯು ಕಾಲೇಜಿನಲ್ಲಿ ವ್ಯಾಸಾಂಗ ಮಾಡ್ತಾ ಇದ್ದಳು. ಈಗಾಗಲೇ ಕನ್ನಡ ಮತ್ತು ಗಣಿತ ಪರೀಕ್ಷೆ ಬರೆದಿರುವ ವಿದ್ಯಾರ್ಥಿನಿ ನಾಳೆ ಭೌತಶಾಸ್ತ್ರ ಪರೀಕ್ಷೆ ಇದ್ದು, ಬೆಳಗ್ಗೆಯಿಂದ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು.ಆದರೆ ಮಧ್ಯಾಹ್ನ 12:30 ಸುಮಾರಿಗೆ ಟೆರೆಸ್ಗೆ ಹೋದ ವಿದ್ಯಾರ್ಥಿನಿ ದೀಪಿಕಾ ವೇಲಿನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆತ್ಮಹತ್ಯೆಗೂ ಮುನ್ನ ಡೆತ್ನೋಟ್ ಬರೆದಿಟ್ಟು, ಆತ್ಮಹತ್ಯೆಗೆ ಶರಣಾಗಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಸ್ಟಡಿ ಹಾಲಿಡೇ ಇದ್ದಿದ್ದರಿಂದ ಎಲ್ಲಾ ವಿದ್ಯಾರ್ಥಿಗಳು ಓದುತ್ತಿದ್ದರು, ಮಧ್ಯಾಹ್ನ 12:30ರ ಸುಮಾರಿಗೆ ಟೆರೆಸ್ಗೆ ಹೋದ ದೀಪಿಕಾ ವೇಲ್ನಿಂದ ನೇಣು ಹಾಕಿಕೊಂಡಿದ್ದಾಳೆ. ಎಷ್ಟು ಹೊತ್ತಾದರೂ ದೀಪಿಕಾ ಬಾರದನ್ನು ಕಂಡ ಸ್ನೇಹಿತರು ರೂಂ ಸೇರಿ ಹಲವೆಡೆ ಹುಡುಕಾಟ ನಡೆಸಿದ್ದಾರೆ. ಎಲ್ಲೂ ಸಿಗದಿದ್ದಾಗ ಟೆರೆಸ್ಗೆ ಹೋಗಿ ನೋಡಿದ್ದಾರೆ. ಟೆರೆಸ್ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ದೀಪಿಕಾಳನ್ನು ಕಂಡು ಸ್ನೇಹಿತೆ ಕಿರುಚಾಡಿದ್ದಾಳೆ. ಕೂಡಲೇ ಲೆಕ್ಚರರ್ಸ್ ಗಾಬರಿಯಿಂದ ಓಡಿ ಹೋಗಿ ನೋಡಿ ಕೂಡಲೇ ದೀಪಿಕಾಳನ್ನು ಆಟೋದಲ್ಲಿ ಪಕ್ಕದಲ್ಲಿದ್ದ ಆಸ್ಪತ್ರೆಗೆ ಸೇರಿಸಲಾಯಿತು, ಅಲ್ಲಿನ ವೈದ್ಯರೂ ಕೂಡಲೇ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ. ಅದರೆ ಅಷ್ಟರಲ್ಲಿ ದೀಪಿಕಾಳ ಪ್ರಾಣಪಕ್ಷಿ ಹಾರಿ ಹೋಗಿದೆ. ಇನ್ನು ದೀಪಿಕಾ ಸಾವಿಗೂ ಮುನ್ನ ಡೆತ್ನೋಟ್ ಬರೆದಿಟ್ಟಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಗಳು ಚೆನ್ನಾಗಿಯೇ ಓದುತ್ತಿದ್ದು, ಟಾಪರ್ ಆಗಿದ್ದಳು. ಅವಳು ಆತ್ಮಹತ್ಯೆ ಮಾಡಿಕೊಳ್ಳುವ ಹುಡುಗಿ ಅಲ್ಲ. ಮಗಳನ್ನು ಆಸ್ಪತ್ರೆಗೆ ಕರೆದುಕೊಂಡ ಮೇಲೆ ನಮಗೆ ಕಾಲ್ ಮಾಡಿದ್ದಾರೆ. ಡೆತ್ನೋಟ್ ಇದೆ ಅಂತಾರೆ ಆದರೆ ಅದನ್ನು ನಮಗೆ ತೋರಿಸ್ತಾ ಇಲ್ಲ. ಮಗಳು ಸತ್ತಿದ್ದರೂ ಒಬ್ಬ ಸ್ನೇಹಿತೆ ಕೂಡ ಇಲ್ಲಿಗೆ ಬಂದಿಲ್ಲ ಎಂದು ಮಗಳ ಸಾವಿನ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದು, ಮಗಳ ಸಾವಿಗೆ ನ್ಯಾಯ ಕೊಡಿಸಬೇಕು ಎಂದು ಗೋಳಾಡಿದರು.
ಚೆನ್ನಾಗಿಯೇ ಓದುತ್ತಿದ್ದ ವಿದ್ಯಾರ್ಥಿನಿ ಏಕಾಏಕಿ ಸೂಸೈಡ್ ಮಾಡಿಕೊಂಡಿದ್ದು, ಸಾಕಷ್ಟು ಅನುಮಾನ ವ್ಯಕ್ತವಾಗಿದ್ದು, ಪೊಲೀಸರ ತನಿಖೆಯಿಂದ ಸತ್ಯಾ ಸತ್ಯತೆ ಹೊರ ಬರಬೇಕಿದೆ. ಅಲ್ಲದೇ ವಿದ್ಯಾರ್ಥಿನಿ ಸಾವಿಗೆ ನ್ಯಾಯ ಸಿಗಬೇಕಿದೆ.