ತುಮಕೂರು : ಬಾಲಕಾರ್ಮಿಕ ಪದ್ದತಿ ಒಂದು ದೊಡ್ಡ ಪಿಡುಗಾಗಿದೆ. ಬಾಲಕಾರ್ಮಿಕ ಪದ್ದತಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರಗಳು ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತಿವೆ. ಆದರೂ, ಈ ಅನಿಷ್ಠ ಪದ್ಧತಿಯನ್ನು ತಡೆಯಲು ಸಾಧ್ಯವಾಗ್ತಿಲ್ಲ. ಇತ್ತ ಶೈಕ್ಷಣಿಕ ಜಿಲ್ಲೆ ತುಮಕೂರಿನಲ್ಲಿ ದಿನೇ ದಿನೇ ಬಾಲಕಾರ್ಮಿಕರನ್ನು ಹಲವು ಕೆಲಸಗಳಿಗೆ ಬಳಸಿಕೊಳ್ಳುವಂತಹ ಪ್ರಕರಣಗಳು ಕಂಡುಬರುತ್ತಿವೆ. ಆದರೆ ಕಾರ್ಮಿಕ ಇಲಾಖೆ ಈ ಪದ್ದತಿಯನ್ನು ತಡೆಯುವಲ್ಲಿ ವಿಫಲವಾಗ್ತಿದೆಯೇ ಅನ್ನೋ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡ್ತಾ ಇದೆ. ಹಾಗೇ ಈ ಅನಿಷ್ಟ ಪದ್ದತಿಯ ಕುರಿತಾಗಿ ಜಾಗೃತಿ ಹಾಗೂ ಅರಿವು ಕಾರ್ಮಕ್ರಮಗಳನ್ನು ಇಲಾಖೆ ಸರಿಯಾಗಿ ಮಾಡ್ತಾ ಇಲ್ಲಾ. ಈ ಕಾರಣಕ್ಕೆ ಬಾಲಕಾರ್ಮಿಕರು ದಿನೇ ದಿನೇ ಹೆಚ್ಚಾಗುತ್ತಿದ್ದಾರೆ ಅನ್ನೋ ಅನುಮಾನ ಕಾಡ್ತಾ ಇವೆ.
ತುಮಕೂರಿನಲ್ಲಿ ಮಕ್ಕಳನ್ನು ಕಾರ್ಖಾನೆ, ಅಂಗಡಿಗಳಲ್ಲಿ, ಬಟ್ಟೆ ಅಂಗಡಿಗಳಲ್ಲಿ, ರಸ್ತೆ ಬದಿಯ ವ್ಯಾಪಾರದಲ್ಲಿ, ಮಾರುಕಟ್ಟೆಗಳಲ್ಲಿ ಕೆಲಸಕ್ಕೆಂದು ಬಳಸಿಕೊಳ್ಳುತ್ತಿರುವುದು ವರದಿಯಾಗ್ತಿದೆ. ಒಂದು ವರ್ಷದಲ್ಲಿ ಸುಮಾರು 397 ಕಡೆ ತಪಾಸಣೆ ನಡೆಸಿ, 11 ಬಾಲಕಾರ್ಮಿಕರನ್ನು ಇಲಾಖೆ ಪತ್ತೆ ಹಚ್ಚಿದೆ. ಮೂರು ಪ್ರಕರಣದಲ್ಲಿ ಮಾಲೀಕರ ವಿರುದ್ಧ ಮೊಕದೊಮ್ಮೆ ಕೂಡ ದಾಖಲಾಗಿದೆ. ಪತ್ತೆಯಾದ ಮಕ್ಕಳ ಪೈಕಿ 4 ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಗೆ ಸೇರಿಸಲಾಗಿದೆ. ಬಾಲಕಾರ್ಮಿಕರನ್ನು ಕೆಲಸಕ್ಕೆ ಬಳಸಿಕೊಳ್ಳುತ್ತಿರುವುದನ್ನು ಇಲಾಖೆ ಪತ್ತೆ ಹಚ್ಚುತ್ತಿದೆ. ಆದರೆ, ಅದನ್ನು ಸಂಪೂರ್ಣವಾಗಿ ತೊಡೆದು ಹಾಕುವಲ್ಲಿ ಕಾರ್ಮಿಕ ಇಲಾಖೆ ವಿಫಲವಾಗ್ತಿದೆ ಅನ್ನೋ ಮಾತುಗಳು ಕೇಳಿಬರ್ತಿವೆ.
ಇನ್ನು ಬಾಲಕಾರ್ಮಿಕರ ಪದ್ಧತಿಯ ಕುರಿತು ಡಿಸಿ ಶುಭಾ ಕಲ್ಯಾಣ್ ಸಭೆ ಕರೆದು ಕಾರ್ಮಿಕ ಇಲಾಖೆಯ ಅಧಿಕಾರಿ ತೇಜಾವತಿ ಅವರಿಗೆ ಖಡಕ್ ಸೂಚನೆ ನೀಡಿದ್ದಾರೆ. ಕೂಡಲೇ ಎಲ್ಲೆಲ್ಲಿ ಮಕ್ಕಳನ್ನು ಕೆಲಸಕ್ಕೆಂದು, ಜೀತಕ್ಕೆಂದು ಸೇರಿಸಿಕೊಂಡಿರುತ್ತಾರೋ ಅದನ್ನು ಪತ್ತೆ ಹಚ್ಚಿ ಸೂಕ್ತ ಕ್ರಮಕೈಗೊಳ್ಳಬೇಕು. ಹಾಗೇ ಜಿಲ್ಲಾದ್ಯಂತ ಮುಂದಿನ ಎರಡು ವಾರ ಕಾರ್ಖಾನೆ, ಗ್ಯಾರೇಜ್ ಗಳಿಗೆ ಅನಿರೀಕ್ಷಿತ ಭೇಟಿ ನೀಡಿ, ಬಾಲ ಕಾರ್ಮಿಕರನ್ನು ಗುರುತಿಸಬೇಕೆಂದು ಸೂಚನೆ ನೀಡಿದ್ದಾರೆ.
ಈ ವಿಚಾರವಾಗಿ ಸಿಐಟಿಯುನ ಮುಖಂಡ ಸುಬ್ರಮಣ್ಯ ಮಾತನಾಡಿ, ತುಮಕೂರಲ್ಲಿ ಬಾಲಕಾರ್ಮಿಕರ ತಪಾಸಣೆಯನ್ನು ಮೊದಲು ಚುರುಕುಗೊಳಿಸಬೇಕು. ಆ ಮೂಲಕ ಮಕ್ಕಳನ್ನು ರಕ್ಷಿಸಿ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಬೇಕು. ಬಾಲಕಾರ್ಮಿಕ ಪದ್ದತಿ ಅನ್ನೋದು ಸಮಾಜಕ್ಕೆ ಅಂಟಿರುವ ಒಂದು ಕಂಟಕವಾಗಿದೆ. ಈ ಪದ್ದತಿಯನ್ನು ನಾಗರೀಕರು ಖಂಡಿಸಬೇಕು. ಬಾಲ ಕಾರ್ಮಿಕರು ತಮ್ಮ ಬಾಲ್ಯವಸ್ತೆಯನ್ನು ಕಳೆದುಕೊಂಡು ಜೀತದಾಳುಗಳಾಗುತ್ತಿದಾರೆ. ಅದನ್ನು ತಡೆಗಟ್ಟುವಲ್ಲಿ ಕೂಡಲೇ ಇಲಾಖೆ ಮತ್ತು ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿದೆ ಎಂದರು.