ತುಮಕೂರು : ಕಡುಬಡವರಿಗೆ ಅತ್ಯಂತ ಕಡಿಮೆ ದರದಲ್ಲಿ ಔಷಧಿ ಸಿಗಲಿ ಎಂಬ ಕಾರಣಕ್ಕೆ ಪ್ರಧಾನ ಮಂತ್ರಿಯವರ ಮಹತ್ವಕಾಂಕ್ಷಿ ಯೋಜನೆಯಾದ ಜನಔಷಧಿ ಕೇಂದ್ರಗಳನ್ನು ಜಾರಿಗೆ ಮಾಡಲಾಗಿತ್ತು. ಈ ಜನಔಷಧಿ ಕೇಂದ್ರಗಳಿಂದ ಬಡವರು ಕಡಿಮೆ ದರದಲ್ಲಿ ಔಷಧಿಗಳನ್ನು ಕೊಂಡು ತಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ತಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರ ಇದೆ ಎಂಬ ಕಾರಣಕ್ಕೆ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿರೋ ಜನಔಷಧಿ ಕೇಂದ್ರಗಳ ಮೇಲೆ ಸರ್ಕಾರದ ಕೆಂಗಣ್ಣು ಬಿದ್ದಿದ್ದು, ಅವುಗಳನ್ನು ಮುಚ್ಚಲು ಮುಂದಾಗಿದೆ. ಹೀಗಾಗಿ ವಿಪಕ್ಷಗಳು ಹಾಗೂ ಸಾರ್ವಜನಿಕರು ಆಕ್ರೋಶಕ್ಕೆ ಕಾರಣವಾಗಿದೆ.
ಬಡವರಿಗೆ, ಸಾಮಾನ್ಯ ಜನರಿಗೆ ಜನೌಷಧಿ ಕೇಂದ್ರದಲ್ಲಿ ಔಷಧಿ ಖರೀದಿಯಲ್ಲಿ ಶೇ. 50-75ರಷ್ಟು ಉಳಿತಾಯವಾಗುತ್ತಿದ್ದು, ಈ ಜನೌಷಧಿ ಕೇಂದ್ರಗಳು ಬಹಳಷ್ಟು ಜನರಿಗೆ, ಅನೂಕೂಲವಾಗಿದ್ದವು. ಅಲ್ಲದೆ ಅನೇಕ ನಿರುದ್ಯೋಗಿ ವೈದ್ಯಕೀಯ ರಂಗದ ಪದವೀಧರರಿಗೆ ಉದ್ಯೋಗ ಕೂಡ ದೊರಕ್ಕಿತ್ತು. ರಿಯಾಯತಿ ದರದಲ್ಲಿ ಅಗತ್ಯ ಔಷಧಿ ದೊರಕುತ್ತಿದ್ದ ಜನೌಷಧಿ ಕೇಂದ್ರಗಳನ್ನು ಬಂದ್ ಮಾಡುವ ನಿರ್ಧಾರದಿಂದ ಸಾಮಾನ್ಯ ಜನರಲ್ಲಿ ಆತಂಕ ಮನೆ ಮಾಡಿದೆ. ಇನ್ನು ಜನಔಷಧಿ ಕೇಂದ್ರಗಳಲ್ಲಿ ಸಿಗ್ತಾ ಇರೋ ಔಷಧಿ ಉತ್ತಮ ಗುಟ್ಟಮಟ್ಟದಲ್ಲಿದೆ ಜೊತೆಗೆ ಕಡಿಮೆ ದರದಲ್ಲಿ ಇದೆ. ಆಸ್ಪತ್ರೆ ಆವರಣದಲ್ಲಿರೋ ಜನೌಷಧಿ ಕೇಂದ್ರಗಳಲ್ಲಿ ಸರಿಯಾದ ಮೆಡಿಸಿನ್ ಕೊಡ್ತಾರೆ. ಹೀಗಾಗಿ ಇಲ್ಲಿನ ಜನೌಷಧಿ ಕೇಂದ್ರಗಳನ್ನು ಬಂದ್ ಮಾಡದಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಜನಔಷಧಿ ಕೇಂದ್ರಗಳ ಮುಚ್ಚುವ ಸರ್ಕಾರದ ನಿರ್ಧಾರಕ್ಕೆ ಬಿಜೆಪಿ ಮುಖಂಡ ಸ್ಪೂರ್ತಿ ಚಿದಾನಂದ ಪ್ರತಿಕ್ರಿಯೆ ನೀಡಿದ್ದು, ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳನ್ನು ಸ್ಥಗಿತಗೊಳಿಸುವದರಿಂದ ಬಡುವರಿಗೆ ಹಾಗೂ ಸಾಮಾನ್ಯ ಜನರಿಗೆ ಸಾಕಷ್ಟು ತೊಂದರೆ ಉಂಟಾಗ್ತಿದೆ. ಕೂಡಲೇ ರಾಜ್ಯ ಸರಕಾರ ಹೊರಡಿದ ಈ ಆದೇಶವನ್ನು ರದ್ದುಗೊಳಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.