ತುಮಕೂರು : ಭಾರತದ ಐಟಿ ಸಿಟಿ, ಸಿಲಿಕಾನ್ ವ್ಯಾಲಿ ಅಂತಲೇ ಕರೆಸಿಕೊಳ್ಳೋ ರಾಜ್ಯ ರಾಜಧಾನಿ ಬೆಂಗಳೂರು ಮಹಾನಗರ ಎಲ್ಲೆ ಮೀರಿ ಬೆಳೆದಿದ್ದು, ಟ್ರಾಫಿಕ್ ಸೇರಿದಂತೆ ಹತ್ತಾರು ಸಮಸ್ಯೆಗಳಿಂದ ಬೆಂಗಳೂರಿನ ಜನರು ಹೈರಾಣಾಗಿ ಹೋಗ್ತಿದ್ದಾರೆ. ಹೀಗಾಗಿ ಬೆಂಗಳೂರು ನಗರದ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸರ್ಕಾರ ನಾನಾ ಕಸರತ್ತು ನಡೆಸುತ್ತಿದೆ. ಜೊತೆಗೆ ಪರ್ಯಾಯ ನಗರಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿಯೂ ಸರ್ಕಾರ ಕೆಲವು ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿದೆ. ಇದರ ಭಾಗವಾಗಿ ಇದೀಗ ತುಮಕೂರು ನಗರದಲ್ಲಿ ಐಟಿ-ಬಿಟಿ ಕಂಪನಿಗಳಿಗೆ ನೆಲೆ ನೀಡಲು ತುಮಕೂರು ಜಿಲ್ಲಾಡಳಿತ ನಿರ್ಧರಿಸಿದ್ದು, ಮಹತ್ವದ ನಿರ್ಧಾರ ಕೈಗೊಂಡಿದೆ.
ಸಾಕಷ್ಟು ಪ್ರತಿಭಾನ್ವಿತರನ್ನು ಹೊಂದಿರುವ ತುಮಕೂರು ಇದೀಗ ಐಟಿ-ಬಿಟಿ ಕಂಪನಿಗಳಿಗೆ ನೆಲೆಯಾಗಲು ಸಜ್ಜಾಗಿದೆ. ಐಟಿ ಹಬ್ ಖ್ಯಾತಿಗೆ ಪಾತ್ರವಾಗಿರುವ ಬೆಂಗಳೂರಿನಿಂದ ಕೇವಲ 70 ಕಿ.ಮೀ ದೂರದಲ್ಲಿರುವ ತುಮಕೂರಿಗೆ ಐಟಿ-ಬಿಟಿ ಕಂಪನಿಗಳ ಶಾಖೆಗಳನ್ನು ತರಲು ತುಮಕೂರು ಜಿಲ್ಲಾಡಳಿತ ವಿಶೇಷ ಆಸಕ್ತಿ ವಹಿಸಿದ್ದು, ಬೆಂಗಳೂರಿನ ಐಟಿ-ಬಿಟಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ತುಮಕೂರು ನಿವಾಸಿಗಳ ಸಮೀಕ್ಷೆಗೆ ಮುಂದಾಗಿದೆ.
ಜಿಲ್ಲೆಯಿಂದ ಬೆಂಗಳೂರಿನ ಐಟಿ- ಬಿಟಿ ಸಂಸ್ಥೆಗಳಿಗೆ ಕೆಲಸಕ್ಕೆ ನಿಮಿತ್ತ ಪ್ರತಿನಿತ್ಯ ಪ್ರಯಾಣಿಸುತ್ತಿರುವ ಐಟಿ ಉದ್ಯೋಗಿಗಳು ತಮ್ಮ ಹಾಗೂ ತಮ್ಮ ಸಂಸ್ಥೆಯ ಅಗತ್ಯ ಮಾಹಿತಿಯನ್ನು ಒದಗಿಸುವಂತೆ ಜಿಲ್ಲಾಧಿಕಾರಿ ಶುಭಕಲ್ಯಾಣ್ ಮನವಿ ಮಾಡಿದ್ದು, ಮಾಹಿತಿ ಅಪ್ಡೇಟ್ ಮಾಡಲು ಕ್ಯೂಆರ್ ಕೋಡ್ ಹಾಗೂ ಗೂಗಲ್ ಫಾರಂ ಲಿಂಕ್ ಕೂಡ ಬಿಡುಗಡೆಗೊಳಿಸಿದ್ದಾರೆ.
ನಗರದ ಡಿಜಿಟಲ್ ಲೈಬ್ರರಿ ಹಾಗೂ ಎಂಜಿ ಸ್ಟೇಡಿಯಂ ಬಳಿಯಿರುವ ಖಾಲಿ ಸ್ಥಳಾವಕಾಶದಲ್ಲಿ ಐಟಿ-ಬಿಟಿ ಕಂಪನಿಗಳ ಶಾಖೆಗಳನ್ನು ತೆರೆಯಲು ಒದಗಿಸಬಹುದು ಎಂದು ಜಿಲ್ಲಾಡಳಿತ ಚಿಂತಿಸಿದೆಯಂತೆ. ಈ ಸ್ಥಳಗಳ ಬಗ್ಗೆ ಐಟಿ ಕಂಪನಿಗಳಿಗೆ ಮಾಹಿತಿ ಒದಗಿಸಿ, ಕಂಪನಿಗಳನ್ನು ಜೂನ್ ತಿಂಗಳಲ್ಲಿ ಒಮ್ಮೆ ತುಮಕೂರಿಗೆ ಆಹ್ವಾನಿಸಿ ಜಿಲ್ಲೆಯ ಮೂಲಸೌಕರ್ಯಗಳ ಬಗ್ಗೆ ಮಾಹಿತಿ ನೀಡುವುದಾಗಿ ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್ ತಿಳಿಸಿದ್ದಾರೆ.
ಇನ್ನು ಕಳೆದ ವಾರ ಕರ್ನಾಟಕ ಡಿಜಿಟಲ್ ಆರ್ಥಿಕ ಮಿಷನ್ ಸಿಇಓ ಸಂಜೀವ್ ಗುಪ್ತಾ ನೇತೃತ್ವದ ತಂಡ ಇತ್ತೀಚಿಗೆ ತುಮಕೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನಿತ್ಯ 5000 ವೃತ್ತಿಪರ ಐಟಿಬಿಟಿ ಉದ್ಯೋಗಿಗಳು ತುಮಕೂರಿನಿಂದ ಬೆಂಗಳೂರಿಗೆ ಪ್ರಯಾಣ ಮಾಡುತ್ತಿದ್ದು, ಟೆಕ್ ಕಂಪನಿಗಳಿಗೆ ನಗರದಲ್ಲಿ ಸ್ಥಳಾವಕಾಶ ಕಲ್ಪಿಸಿದರೆ ಅವರು ಶಾಖೆ ತೆರೆಯಲು ಮುಂದಾಗುತ್ತಾರೆ ಎಂದು ಹೇಳಿದ್ದರು. ಜೊತೆಗೆ ಐಟಿಬಿಟಿ ಇಲಾಖೆ ಕಾರ್ಯದರ್ಶಿ ಡಾ.ಏಕರೂಪ್ ಕೌರ್ ಹಾಗೂ ನಿರ್ದೇಶಕ ರಾಹುಲ್ ಸಂಕನೂರು ತುಮಕೂರಿನಂತಹ ಟೈರ್ 2 ಸಿಟಿಗಳಲ್ಲಿ ಐಟಿ ಬಿಟಿ ಕಂಪನಿಗಳನ್ನು ವಿಸ್ತರಣೆ ಮಾಡಿದರೆ ಅವರಿಗೆ ಆರ್ಥಿಕವಾಗಿ ಅನುಕೂಲವಿದೆ ಎಂದು ಹೇಳಿದ್ದು. ಇವರೆಲ್ಲರ ಸಲಹೆ ಆಧರಿಸಿ ಜಿಲ್ಲಾಡಳಿತ ತುಮಕೂರಿಗೆ ಐಟಿಬಿಟಿ ಕಂಪನಿಗಳನ್ನು ಆಹ್ವಾನಿಸಲು ಸಿದ್ಧತೆಯಲ್ಲಿ ತೊಡಗಿದೆ.
ರಾಜ್ಯ ರಾಜಧಾನಿಗೆ ಪರ್ಯಾಯ ನಗರವಾಗಿ ಬೆಳೆಯುತ್ತಿರುವ ತುಮಕೂರಿನಲ್ಲಿ ಐಟಿಬಿಟಿ ಕಂಪನಿಗಳು ತಲೆಯೆತ್ತಿದರೆ ಕೆಲಸಕ್ಕಾಗಿ ಇಲ್ಲಿಂದ ನಿತ್ಯ ರಾಜಧಾನಿಗೆ ಹೋಗುವಂತಹ ಉದ್ಯೋಗಿಗಳಿಗೆ ಅನುಕೂಲವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿ ಐಟಿ-ಬಿಟಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ತುಮಕೂರಿನ ನಿವಾಸಿಗಳು ಜಿಲ್ಲಾಡಳಿತದಿಂದ ಬಿಡುಗಡೆಗೊಳಿಸಿರುವ ಗೂಗಲ್ ಫಾರಂಗಳನ್ನು ಆದಷ್ಟು ಬೇಗನೇ ಭರ್ತಿ ಮಾಡಿಕೊಡಬೇಕಿದೆ. ಇನ್ನೊಂದು ಕಡೆ ಜಿಲ್ಲಾಡಳಿತದ ಆಮಂತ್ರಣವನ್ನು ಸ್ವೀಕರಿಸಿ ತುಮಕೂರಿನಲ್ಲಿ ಐಟಿ-ಬಿಟಿ ಕಂಪನಿಗಳು ತಲೆ ಎತ್ತಲಿವೆಯಾ ಅನ್ನೋದನ್ನು ಕಾದು ನೋಡಬೇಕಿದೆ.