TUMAKURU: ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಇಂದಿನಿಂದ ತುಮಕೂರು ಜಿಲ್ಲೆಯಲ್ಲಿ 60 ದಿನಗಳ ಕಾಲದ ಪ್ರವಾಸ ಆರಂಭಿಸಿದ್ದಾರೆ. ಈ ಉದ್ದಗಲದ ಪ್ರವಾಸದ ಭಾಗವಾಗಿ ಅವರು ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಸಭೆಗಳನ್ನು ನಡೆಸಲಿದ್ದಾರೆ.
ಪ್ರವಾಸದ ಮೊದಲ ದಿನ, ನಿಖಿಲ್ ಕುಮಾರಸ್ವಾಮಿ ಪ್ರತಿಷ್ಠಿತ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದರು. ಮಠದ ಪೂಜ್ಯ ಶ್ರೀ ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ನಿಖಿಲ್ ಕುಮಾರಸ್ವಾಮಿಗೆ ಅಭಿಮಾನಿಗಳು ಹಾಗೂ ಸ್ಥಳೀಯ ನಾಯಕರಿಂದ ಅದ್ದೂರಿ ಸ್ವಾಗತ ದೊರೆಯಿತು.
ಪತ್ರೆ, ಹಾರ, ಪುಷ್ಪಗುಚ್ಛಗಳೊಂದಿಗೆ ನಿಖಿಲ್ ಅವರನ್ನು ರಾಜಕೀಯ ನಾಯಕರು ಬರಮಾಡಿಕೊಂಡರು, ಈ ವೇಳೆ ಶಾಸಕರಾದ ಸುರೇಶ್ ಗೌಡ, ಸುರೇಶ್ ಬಾಬು, ಜ್ಯೋತಿ ಗಣೇಶ್, ನಾಗರಾಜು, ಹೆಬ್ಬಾಕ ರವಿ ಮತ್ತು ಎಚ್. ನಿಂಗಪ್ಪ ಸೇರಿದ್ದರು. ಜೊತೆಗೆ ಜೆಡಿಎಸ್ ಮೈತ್ರಿ ನಾಯಕರು ಸಹ ಈ ವೇಳೆ ಹಾಜರಿದ್ದರು.
ಈ ಪ್ರವಾಸದ ಮೂಲಕ ನಿಖಿಲ್ ಕುಮಾರಸ್ವಾಮಿ, ಪಕ್ಷದ ಬೂತ್ ಮಟ್ಟದ ಸಂಘಟನೆಗೆ ನೂತನ ಚೈತನ್ಯ ನೀಡಲು ಪ್ರಯತ್ನಿಸುತ್ತಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳು, ಕಾರ್ಯಕರ್ತರೊಂದಿಗಿನ ನೇರ ಸಂವಾದದ ಮೂಲಕ 2028 ವಿಧಾನಸಭಾ ಚುನಾವಣೆಗೆ ಭದ್ರ ಭೂಮಿ ಸಿದ್ಧಗೊಳಿಸುವ ಉದ್ದೇಶವಿದೆ ಎನ್ನಲಾಗ್ತಿದೆ.