TUMAKURU : ತುಮಕೂರನ್ನು ನಾವು ಸ್ಮಾರ್ಟ್ ಸಿಟಿ, ಡೆವಲೆಮೆಂಟ್ ಸಿಟಿ, ಸ್ವಚ್ಛನಗರ, ಸೆಕೆಂಡ್ ಬೆಂಗಳೂರು ಅಂತ ಕರಿತೀವಿ. ಆದರೆ ಮಹಾನಗರ ಪಾಲಿಕೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ತನ್ನ ಹೆಸರಿಗೆ ಮಸಿ ಬಳಿದುಕೊಳ್ಳುತ್ತಿದೆ ತುಮಕೂರು. ನಗರದಾದ್ಯಂತ ಎಲ್ಲೆಂದರಲ್ಲಿ ಕಸದ ರಾಶಿ ರಾಶಿ ಬಿದ್ದಿದ್ದರೂ ಪಾಲಿಕೆ ಕ್ಲೀನ್ ಮಾಡ್ತಿಲ್ಲ ಅಂತ ಸಾರ್ವಜನಿಕರು ಆಕ್ರೋಶ ಹೊರಹಾಕ್ತಿದಾರೆ. ಇತ್ತ ನಗರದ ಬಹುತೇಕ ಕಡೆಗಳಲ್ಲಿ ಕೊಳಚೆ ನೀರು ಹಲವು ಸಮೃದ್ಧ ಕೆರೆಗಳಿಗೆ ತಲುಪುವ ಮೂಲಕ ಸ್ವಚ್ಛತೆ ಮರೀಚಿಕೆ ಆಗಿದೆ. ಕೆಲವು ಕಡೆ ಗಿಡಗೆಂಟೆಗಳು ಬೆಳೆದು, ಹಂದಿ ನಾಯಿಗಳ ಅವಾಸಸ್ಥಾನವಾಗ್ತಿದೆ. ಇಂತಹ ಅವ್ಯವಸ್ಥೆಗೆ ಸಾಕ್ಷಿಯಾಗ್ತಿರೋದು ವಾರ್ಡ್ ನಂಬರ್ – 22..
ತುಮಕೂರಿನ ವಾರ್ಡ್ ನಂಬರ್ 22 ವಿದ್ಯಾನಗರದಲ್ಲಿ ಅಕ್ಷರಶಃ ಸ್ವಚ್ಛತೆ ಅನ್ನುವುದು ಕಾಣ್ತಿಲ್ಲ. ವಾರ್ಡಿನ ಸುತ್ತಮುತ್ತಲ ಪ್ರದೇಶದಲ್ಲಿ ಎಲ್ಲೆಂದರಲ್ಲಿ ರಾಶಿ ರಾಶಿ ಕಸ ಬಿದ್ದಿದೆ. ಅಲ್ಲಲ್ಲಿ ಹಳ್ಳಕೊಳ್ಳಗಳು ಇರೋದರಿಂದ ನೀರು ನಿಂತು ಗಬ್ಬೆದ್ದು ನಾರುತ್ತಿದೆ. ಅಲ್ಲಿ ಸಾರ್ವಜನಿಕರು ಸಂಚಾರ ಮಾಡಲು ಪರದಾಡುತ್ತಿದ್ದು, ಮೂಗುಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತ ವಾರ್ಡ್ ಕೊಳಚೆಯಿಂದಾಗಿ ಸಾರ್ವಜನಿಕರು ಹಲವು ಮಾರಕ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎನ್ನಲಾಗ್ತಿದೆ.
ಇತ್ತ ಕಸದ ರಾಶಿ ರಾಶಿ ಬಿದ್ದಿದ್ದರೂ ಕೂಡ ಪಾಲಿಕೆಗೆ ಅಧಿಕಾರಿಗಳಾಗಲಿ, ಸಿಬ್ಬಂದಿಗಳಾಗಲಿ ಇತ್ತ ತಲೆ ಹಾಕುತ್ತಿಲ್ಲ. ಇಡೀ ವಾರ್ಡ್ ಗಬ್ಬೆದ್ದು ನಾರುತ್ತಿದೆ. ಸರಿಯಾದ ಸಮಯಕ್ಕೆ ಕಸದ ಗಾಡಿಗಳು ಬರುತ್ತಿಲ್ಲ. ವಾರ್ಡ್ನ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆದು ಹೋಗುತ್ತಿದ್ದಾರೆ. ಈ ಕಾರಣಕ್ಕೆ ಸರಿಯಾಗಿ ಕಸ ವಿಲೇವಾರಿ ಆಗುತ್ತಿಲ್ಲ ಅಂತ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇತ್ತ ಇಲ್ಲಿ ನಿಲ್ಲುತ್ತಿರುವ ಕೊಳಚೆ ನೀರು ಹೈವೆ ಪಕ್ಕದಲ್ಲಿರುವ ಇತಿಹಾಸ ಪ್ರಸಿದ್ಧ ಅಕ್ಕತಂಗಿ ಕೆರೆ ಸೇರುತ್ತಿದೆಯೇ ಅನ್ನೋ ಪ್ರಶ್ನೆ ಮೂಡುತ್ತಿದೆ.
ಅದೇನೇ ಇರಲಿ ಇಷ್ಟೆಲ್ಲ ರಾಶಿ ರಾಶಿ ಕಸ ಬಿದ್ದು , ಆ ಕಸದಿಂದ ಇಷ್ಟೆಲ್ಲ ತೊಂದರೆ ಆಗ್ತಾ ಇದ್ರು ಕೂಡ ಪಾಲಿಕೆ ಸಿಬ್ಬಂದಿಗಳು ಈ ಜಾಗವನ್ನು ಸ್ವಚ್ಛತೆ ಮಾಡದಿರೋದು ಬೇಸರ ಸಂಗತಿ. ಇನ್ನಾದರೂ ಸಂಬಂಧಪಟ್ಟಂತ ಅಧಿಕಾರಿಗಳು ಎಚ್ಚೆತ್ತುಕೊಂಡು ವಿದ್ಯಾನಗರದ ರಸ್ತೆಗಳನ್ನು ಹಾಗೂ ಈ ಕಟ್ಟೆಯನ್ನು ಸ್ವಚ್ಛಗೊಳಿಸ್ತಾರಾ ಕಾದು ನೋಡಬೇಕಿದೆ.