TUMAKURU : ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಂದಿರಾ ಕ್ಯಾಂಟೀನ್ಗಳಲ್ಲಿ ಪ್ರಸ್ತುತ ನೂತನವಾಗಿ ಮೆನು ಸಿದ್ಧಪಡಿಸಲಾಗಿದೆ. ಈ ಮೆನುವಿನಂತೆ ಬೆಳಗ್ಗಿನ ಉಪಹಾರದಲ್ಲಿ ರೈಸ್ಬಾತ್, ಚಿತ್ರಾನ್ನ, ಉಪ್ಪಿಟ್ಟು, ಕೇಸರಿಬಾತ್, ಇಡ್ಲಿ-ಸಾಂಬಾರ್-ಚಟ್ನಿ, ಮಧ್ಯಾಹ್ನದ ಊಟಕ್ಕೆ ಮುದ್ದೆ, ಅನ್ನ, ಸಾಂಬಾರು, ಮೊಸರನ್ನ, ಚಪಾತಿ ಹಾಗೂ ರಾತ್ರಿ ಊಟಕ್ಕೆ ರೈಸ್ಬಾತ್ ಮತ್ತು ಮೊಸರನ್ನು ನೀಡಲಾಗುತ್ತಿದೆ. ಇದರಿಂದ ಇಂದಿರಾ ಕ್ಯಾಂಟಿನ್ ಗೆ ಊಟಕ್ಕೆ ಬರುವವರು ಹೊಸ ಮೆನು ನೋಡಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ 4 ಇಂದಿರಾ ಕ್ಯಾಂಟೀನ್ಗಳೊಂದಿಗೆ ಹೊಸದಾಗಿ ತುಮಕೂರು ಜಿಲ್ಲಾಸ್ಪತ್ರೆ ಮತ್ತು ಎಪಿಎಂಸಿ ಮಾರುಕಟ್ಟೆ ಬಳಿ 2 ಇಂದಿರಾ ಕ್ಯಾಂಟೀನ್ಗಳನ್ನು ಕಾರ್ಯಾರಂಭ ಗೊಳಿಸಲಾಗಿದೆ. ಪ್ರತಿ ದಿನ ಜಿಲ್ಲಾಸ್ಪತ್ರೆಗೆ ಭೇಟಿ ನೀಡುವ ರೋಗಿಗಳು ಹಾಗೂ ಮಾರುಕಟ್ಟೆಗೆ ಆಗಮಿಸುವ ರೈತರು, ಗ್ರಾಹಕರು ಹಾಗೂ ವರ್ತಕರ ಅನುಕೂಲಕ್ಕಾಗಿ ಹೊಸದಾಗಿ 2 ಇಂದಿರಾ ಕ್ಯಾಂಟೀನ್ಗಳನ್ನು ಪ್ರಾರಂಭಿಸಲಾಗಿದೆ.
ಸಾಮಾಜಿಕ, ಆರ್ಥಿಕ ಪರಿಸ್ಥಿತಿಗಳಿಂದಾಗಿ ಬಡಜನರು ಅವರ ಸಮತೋಲಿತ ಹಾಗೂ ಪೌಷ್ಠಿಕ ಆಹಾರದಿಂದ ವಂಚಿತರಾಗುವುದನ್ನು ತಪ್ಪಿಸಲು ಸರ್ಕಾರವು ರಾಜ್ಯದ ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಇಂದಿರಾ ಕ್ಯಾಂಟೀನ್ ಅನ್ನು ಪ್ರಾರಂಭಿಸಿ 5 ರೂ.ಗಳಿಗೆ ಬೆಳಗ್ಗಿನ ಉಪಹಾರ ಹಾಗೂ 10 ರೂ.ಗಳಿಗೆ ಮಧ್ಯಾಹ್ನ ಮತ್ತು ಸಂಜೆಯ ಊಟಗಳನ್ನು ಒದಗಿಸುತ್ತಿದೆ.
ಒಟ್ಟಿನಲ್ಲಿ ಹೊಸ ಇಂದಿರಾ ಕ್ಯಾಂಟೀನ್ ಓಪನ್ ಮಾಡಿ, ಹಸಿದವರಿಗೆ ಅನ್ನ ಹಾಕುವ ಕೆಲಸಕ್ಕೆ ಮುಂದಾಗಿರುವುದು ಸಾರ್ವಜನಿಕರು ಸಂತಸ ವ್ಯಕ್ತಪಡಿಸುತಿದ್ದಾರೆ. ನಗರದಲ್ಲಿರುವ ಇಂದಿರಾ ಕ್ಯಾಂಟೀನ್ಗಳು ಸುಸಜ್ಜಿತ ಮತ್ತು ಆಧುನಿಕವಾದ ಮಾಸ್ಟರ್ ಕಿಚನ್ ಅನ್ನು ಒಳಗೊಂಡಿವೆ. ಪ್ರತಿ ಕ್ಯಾಂಟೀನ್ಗಳಲ್ಲಿ ಶುದ್ಧ ಹಾಗೂ ಆರೋಗ್ಯಕರ ಕುಡಿಯುವ ನೀರನ್ನು ಸರಬರಾಜು ಮಾಡಲು ಆರ್.ಓ ಪ್ಲಾಂಟ್ನ್ನು ಅಳವಡಿಸಲಾಗಿದೆ.
ಮಹಾನಗರ ಪಾಲಿಕೆಯಿಂದ ನಿರ್ಮಾಣವಾಗಿರುವ ನೂತನ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಜನಮೆಚ್ಚುಗೆ ಗಳಿಸುತ್ತಿದೆ. ಮುಂದಿನ ದಿನಗಳಲ್ಲಿ ಇಂದಿರಾ ಕ್ಯಾಂಟೀನ್ ಯಾವ ರೀತಿಯಾಗಿ ಜನರಿಗೆ ಊಟದ ವ್ಯವಸ್ಥೆಯನ್ನು ಮಾಡುತ್ತದೆ ಎಂದು ಕಾದು ನೋಡಬೇಕಿದೆ.