TUMAKURU : ತುಮಕೂರಿನಲ್ಲಿ ಹೇಮಾವತಿ ಹೋರಾಟ ತಣ್ಣಗಾಗುವ ಲಕ್ಷಣ ಮಾತ್ರ ಕಾಣಿಸ್ತಾ ಇಲ್ಲ. ಹೇಮೆ ಕಿಚ್ಚು ಜ್ವಾಲಮುಖಿಯಂತೆ ವ್ಯಾಪಿಸ್ತಾ ಇದ್ದು, ಇಂದು ರಾಜ್ಯಾದ್ಯಂತ ಸದ್ದು ಮಾಡುತ್ತಿದೆ. ಹೇಮಾವತಿ ಲಿಂಕ್ ಕೆನಾಲ್ಗೆ ವಿರೋಧಿಸಿ ಮೇ 31 ರಂದು ಉಗ್ರ ಹೋರಾಟ ಮಾಡಿದ್ದ ಹೋರಾಟಗಾರರ ಮೇಲೆ ಎಫ್ಐಆರ್ ಹಾಕಲಾಗಿದ್ದು, ಅದರಲ್ಲಿ ಕೆಲವರ ಬಂಧನ ಕೂಡ ಆಗಿದೆ.
ಸರ್ಕಾರ ಹೋರಾಟಗಾರರ ಮೇಲೆ ಎಫ್ಐಆರ್ ಬ್ರಹ್ಮಸ್ತ್ರಕ್ಕೆ ನಾಯಕರು ಕೆಂಡಾಮಂಡಲರಾಗಿದ್ದು, ನಿನ್ನೆ ಸೊಗಡು ಶಿವಣ್ಣ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದರು. ಆದರೆ ಸೊಗಡು ಶಿವಣ್ಣ ಅವರ ಹೋರಾಟಕ್ಕೆ ಖಾಕಿ ಅಡ್ಡಿಯಾಗಿದ್ದು, ವಶಕ್ಕೆ ಪಡೆದುಕೊಂಡು ಬಳಿಕ ಬಿಡುಗಡೆ ಮಾಡಿದರು. ಅಲ್ಲದೇ ಎಫ್ಐಆರ್ ವಾಪಸ್ಗೆ ಆಗ್ರಹಿಸಿದರು. ಆದರೆ ಹೋರಾಟಗಾರರ ಆಗ್ರಹಕ್ಕೆ ಕಿಮ್ಮತ್ತು ಕೊಡದ ಪೊಲೀಸ್ ಇಲಾಖೆ ಹೋರಾಟಗಾರರು ಹಾಗೂ ಮಠಾಧೀಶರ ಮೇಲೆ ದಾಖಲಾಗಿದ್ದ ಎಫ್ಐಆರ್ನನ್ನು ವಾಪಸ್ ಮಾತ್ರ ತೆಗೆದುಕೊಂಡಿರಲಿಲ್ಲ. ಹೀಗಾಗಿ ನಿನ್ನೆಯೇ ಹೋರಾಟಗಾರರು ಎಸ್ಪಿ ಕಚೇರಿಗೆ ಮುತ್ತಿಗೆ ಹಾಕಲು ಕರೆ ಕೊಟ್ಟಿದ್ದರು. ಅದರಂತೆ ಇಂದು ಹೇಮೆ ಹೋರಾಟಗಾರರು ಮತ್ತೊಂದು ಹೋರಾಟಕ್ಕೆ ಮುನ್ನುಡಿ ಬರೆದರು.
ಹೇಮೆ ಹೋರಾಟಗಾರರ ಮುಂಚೂಣಿ ಸ್ಥಾನದಲ್ಲಿರೋ ಸೊಗಡು ಶಿವಣ್ಣ ನೇತೃತ್ವದಲ್ಲಿ ಇಂದು ಎಸ್ಪಿ ಕಛೆರಿಗೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿತ್ತು. ಅದರಂತೆ ಶಾಸಕರಾದ ಎಂ.ಟಿ ಕೃಷ್ಣಪ್ಪ, ಸುರೇಶ್ ಗೌಡ, ಸೊಗಡು ಶಿವಣ್ಣ, ಹೆಬ್ಬಾಕ ರವಿ, ಹಿಂದೂ ಪರ ಹೋರಾಟಗಾರ ಮಂಜು ಭಾರ್ಗವ್ ಸೇರಿ ನೂರಾರು ಮಂದಿ ಹೋರಾಟಗಾರರು ಎಸ್ಪಿ ಕಚೇರಿ ಮುಂದೆ ಜಮಾಯಿಸಿದರು. ಎಲ್ಲ ನಾಯಕರು ಒಗ್ಗಟ್ಟಾಗಿ ಎಸ್ಪಿ ಕಚೇರಿಗೆ ಆಗಮಿಸಿದರು. ಮುತ್ತಿಗೆಗೆ ಕರೆ ನೀಡಿದ್ದ ಬೆನ್ನಲ್ಲೇ ಎಸ್ಪಿ ಕಚೇರಿಗೆ ಬಂದ ನಾಯಕರನ್ನು ಒಳಗೆ ಬಿಡಲು ಪೊಲೀಸರು ಒಪ್ಪಲಿಲ್ಲ. ಆದರೆ ನಾವು ಮುತ್ತಿಗೆ ಹಾಕಲು ಬಂದಿಲ್ಲ ಬದಲಾಗಿ ಮನವಿ ಕೊಡಲು ಬಂದಿದ್ದೇವೆ ಎಂದು ನಾಯಕರು ಮನವಿ ಮಾಡಿಕೊಂಡಿದ್ದು, ನಾಯಕರ ಮನವಿಗೆ ಒಪ್ಪಿದ ಪೊಲೀಸರು ಹೋರಾಟಗಾರರನ್ನು ಎಸ್ಪಿ ಕಚೇರಿ ಒಳಗೆ ಹೋಗಲು ಅವಕಾಶ ಕೊಟ್ಟರು.
ಇನ್ನು ಎಸ್ಪಿ ಕಚೇರಿಗೆ ಹೋರಾಟಗಾರರು ಬಂದ ಬಗ್ಗೆ ಮಾಹಿತಿ ಬಂದ ಕೂಡಲೇ ಎಸ್ಪಿ ಕಚೇರಿಗೆ ಐಜಿಪಿ ಲಾಬೂರಾಮ್ ದೌಡಾಯಿಸಿದ್ದು, ಎಸ್ಪಿ ಕಚೇರಿಯಲ್ಲಿ ಸೊಗಡು ಶಿವಣ್ಣ, ಶಾಸಕರಾದ ಎಂ.ಟಿ ಕೃಷ್ಣಪ್ಪ, ಸುರೇಶ್ ಗೌಡ, ಹೆಬ್ಬಾಕ ರವಿ ಜೊತೆ ಚರ್ಚೆ ನಡೆಸಿದರು. ಈ ವೇಳೆ ಪ್ರತಿಭಟನೆ ಕೈಬಿಡುವಂತೆ ಐಜಿಪಿ ಲಾಬೂರಾಮ್ ಮನವೊಲಿಕೆ ಮಾಡಿದರು. ಆದರೆ ಒಂದು ವೇಳೆ ಕೆನಾಲ್ ಓಪನ್ ಆದರೆ ತುಮಕೂರಿನ ಜನಕ್ಕೆ ನೀರಿನ ವಿಚಾರವಾಗಿ ಅನ್ಯಾಯ ಆಗುತ್ತೆ. ಹೀಗಾಗಿ ನಾವು ಕೆನಾಲ್ ಕಾಮಗಾರಿಗೆ ವಿರೋಧಿಸುತ್ತಿದ್ದೇವೆ ಎಂದು ಐಜಿಪಿಗೆ ಹೋರಾಟಗಾರರು ಸ್ಪಷ್ಟನೆ ನೀಡಿದರು, ನನಗೆ ಕಾಮಗಾರಿಯ ಟೆಕ್ನಿಕಲ್ ಬಗ್ಗೆ ತಿಳಿದಿಲ್ಲ ಎಂದು ಹೋರಾಟಗಾರರ ಪ್ರಶ್ನೆ ಜಾರಿಕೊಳ್ಳಲು ಐಜಿಪಿ ಯತ್ನಿಸಿದ ಪ್ರಸಂಗವೂ ನಡೆದಿದೆ.
ಬಳಿಕ ಕಚೇರಿಯಿಂದ ಹೊರ ಬಂದ ಹೋರಾಟಗಾರರು ಎಸ್ಪಿ ಕಚೇರಿಯ ಮೆಟ್ಟಿಲುಗಳ ಮೇಲೆ ಕೂತು ಧಿಕ್ಕಾರ ಕೂಗಿ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು. ಈ ವೇಳೆ ಮಧ್ಯಪ್ರವೇಶಿಸಿದ ಎಸ್ಪಿ ಅಶೋಕ್ ಹಾಗೂ ಐಜಿಪಿ ಲಾಬೂರಾಮ್ ಹೋರಾಟಗಾರರ ಮನವರಿಕೆಗೆ ಮತ್ತೆ ಮುಂದಾದ್ರು. ಪ್ರತಿಭಟನಕಾರರನ್ನು ಮನವೊಲಿಸುವಲ್ಲಿ ಎಸ್ಪಿ ಯಶಸ್ವಿಯಾಗಿದ್ದು, ಎಸ್ಪಿ ಮೇಲೆ ನಂಬಿಕೆ ಇಟ್ಟು ನಾಯಕರು ಪ್ರತಿಭಟನೆಯನ್ನು ಹಿಂಪಡೆದುಕೊಂಡರು.
ಸದ್ಯದ ಮಟ್ಟಿಗೆ ಎಸ್ಪಿ ಭರವಸೆ ಮೇರೆಗೆ ಹೇಮಾವತಿ ಹೋರಾಟಗಾರರು ಇಂದಿನ ಪ್ರತಿಭಟನೆಯನ್ನು ಕೈಬಿಟ್ಟಿದ್ದು, ಮುಂದಿನ ದಿನಗಳಲ್ಲಿ ಯಾವ ರೀತಿಯ ಸ್ವರೂಪಕ್ಕೆ ತಿರುವು ಪಡೆದುಕೊಳ್ಳುತ್ತೋ ಕಾದು ನೋಡಬೇಕಿದೆ.