TUMAKURU: ಯುವರಾಜ್ ಕುಮಾರ್ ಮತ್ತು ಸಂಜನಾ ಆನಂದ್ ಜೋಡಿಯಾಗಿ ಅಭಿನಯಿಸಿರುವ ‘ಎಕ್ಕ’ ಚಿತ್ರವು ಬಿಡುಗಡೆಯತ್ತ ವೇಗವಾಗಿ ಸಾಗುತ್ತಿದ್ದು, ಚಿತ್ರದ ಪ್ರಚಾರ ಕಾರ್ಯಕ್ರಮಗಳು ಭಾರೀ ಗತಿಯಲ್ಲಿ ನಡೆಯುತ್ತಿವೆ. ಚಿತ್ರದಲ್ಲಿನ 'ಬ್ಯಾಂಗಲ್ ಬಂಗಾರಿ' ಹಾಡು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹಿಟ್ ಆಗಿದ್ದು, ಯೂತ್ ನಡುವೆ ರೀಲ್ಸ್ ಮೂಲಕ ದೊಡ್ಡ ಮಟ್ಟದ ಸದ್ದು ಮಾಡುತ್ತಿದೆ.
'ಎಕ್ಕ' ಸಿನಿಮಾ ಜುಲೈ 18ರಂದು ತೆರೆಗೆ ಬರಲಿದ್ದು, ಚಿತ್ರತಂಡ ರಾಜ್ಯದ ವಿವಿಧ ಭಾಗಗಳಲ್ಲಿ ಸಿನಿಮಾ ಪ್ರಚಾರ ನಡೆಸುತ್ತಿದೆ. ಹೀಗಾಗಿ ನಿನ್ನೆ ತುಮಕೂರಿನ ಸಿದ್ದಗಂಗಾ ಮಠಕ್ಕೆ ಚಿತ್ರತಂಡ ಭೇಟಿ ನೀಡಿತ್ತು. ಸಿದ್ಧಗಂಗಾ ಮಠದ ಪ್ರವೇಶದ ಸಮಯದಲ್ಲಿ ಚಿತ್ರತಂಡದ ಬೌನ್ಸರ್ ವಾಹನವು ಅಪಘಾತ ಸಂಭವಿಸಿದ್ದು, ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಮಹಿಳೆ ಕಾಲಿಗೆ ತೀವ್ರ ಗಾಯವಾದರೂ, ತಕ್ಷಣ ಆಸ್ಪತ್ರೆಗೆ ದಾಖಲಿಸದೇ ಚಿತ್ರತಂಡ ಅಮಾನವೀಯವಾಗಿ ವರ್ತಿಸಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಅಪಘಾತ ಮಾಡಿ ಗಾಯಾಳು ಆರೋಗ್ಯವನ್ನು ಚಿತ್ರತಂಡ ವಿಚಾರಿಸಿಲ್ಲ. ಸದ್ಯ ಜಿಲ್ಲಾಸ್ಪತ್ರೆಯಲ್ಲಿ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಿಳೆಯ ಕಾಲು ಮೂಳೆ ಮುರಿತವಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದ್ದು. ಇದುವರೆಗೂ ಚಿತ್ರತಂಡ ಮಹಿಳೆಯನ್ನ ಭೇಟಿಯಾಗಲು ಬಂದಿಲ್ಲ ಬದಲಿಗೆ ತಮ್ಮ ಪ್ರಮೋಷನ್ನಲ್ಲೇ ಬ್ಯುಸಿಯಾಗಿದೆ ಎಂದು ಮಹಿಳೆಯ ಕುಟುಂಬಸ್ಥರು ಆಕ್ರೋಶ ಹೊರಹಾಕುತ್ತಿದ್ದಾರೆ. ಹೀಗಾಗಿ ಚಿತ್ರತಂಡದ ವಿರುದ್ಧ ದೂರು ಕೊಡಲು ಮುಂದಾಗಿದ್ದಾರೆ.