CHIKKAMAGALURU : ಗಾಳಿ-ಮಳೆಗೆ ಧರೆಗುರುಳಿದ ಮರ | ಮುಳ್ಳಯ್ಯನಗಿರಿ-ದತ್ತಪೀಠ ಮಾರ್ಗ ಬಂದ್

CHIKKAMAGALURU NEWS : ಕಾಫಿನಾಡ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಭಾರೀ ಗಾಳಿ-ಮಳೆಗೆ ಬೃಹತ್ ಮರ ರಸ್ತೆಗೆ ಉರುಳಿ ಬಿದ್ದ ಪರಿಣಾಮ ಚಿಕ್ಕಮಗಳೂರು-ಮುಳ್ಳಯ್ಯನಗಿರಿ-ದತ್ತಪೀಠ ಮಾರ್ಗ ಸಂಪೂರ್ಣವಾಗಿ ಬಂದ್ ಆಗಿದೆ.

ಇನ್ಟನು ಈ ಘಟನೆ ಇಂದು ಬೆಳ್ಳಗ್ಗೆ ಸಂಭವಿಸಿದ್ದು, ಮರ ಬೀಳಿದ್ದ ಸ್ಥಳವು ದತ್ತಪೀಠ ಹಾಗೂ ಮುಳ್ಳಯ್ಯನಗಿರಿಗೆ ಕೇವಲ 4 ಕಿ.ಮೀ ದೂರದಲ್ಲಿರುವ ಕೈಮರ ಸರ್ಕಲ್ ಬಳಿ ಆಗಿದೆ. ಇದರಿಂದಾಗಿ ಪ್ರವಾಸಿಗರು ಹಾಗೂ ಸ್ಥಳೀಯರು ಪರದಾಟ ಅನುಭವಿಸುವಂತಾಗಿದೆ. ಮಾರ್ಗದ ಎರಡೂ ಕಡೆ ಟ್ರಾಫಿಕ್ ಜಾಮ್ ಉಂಟಾಗಿ ಸಾರ್ವಜನಿಕರಿಗೆ ತೊಂದರೆಯಾಯಿತು.

ಘಟನೆಯ ನಂತರ ಸ್ಥಳೀಯರು ಮತ್ತು ಗ್ರಾಮಾಂತರ ಪೊಲೀಸ್ ಇಲಾಖೆ ಮಧ್ಯಪ್ರವೇಶಿಸಿ, ಮರವನ್ನು ತೆರವುಗೊಳಿಸಿ ಸಂಚಾರ ಪುನರ್ ಸ್ಥಾಪಿಸಲು ಮುಂದಾಗಿದ್ದಾರೆ. ಮಳೆ ಹಾಗೂ ಗಾಳಿಯ ತೀವ್ರತೆಗೆ ಇನ್ನೂ ಇತರ ಭಾಗಗಳಲ್ಲಿಯೂ ಇಂತಹ ಅಪಾಯದ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಪ್ರವಾಸಿಗರು ಎಚ್ಚರಿಕೆಯಿಂದ ಸಂಚರಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

ಇದೇ ವೇಳೆ, ಕೊಪ್ಪ ತಾಲೂಕಿನ ಮೇಗುಂದಾ ಸಮೀಪದ ವೆಂಕಟರಮಣ ದೇವಸ್ಥಾನದ ಬಳಿ ಕೊಗ್ರೆ ಗ್ರಾಮಕ್ಕೆ ಹೋಗುವ ಮಾರ್ಗದಲ್ಲೂ ಮತ್ತೊಂದು ಬೃಹತ್ ಮರ ಉರುಳಿ ಬಿದ್ದಿದ್ದು, ಸ್ಥಳೀಯ ನಾಲ್ಕು-ಐದು ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ. ಮರ ಬುಡಸಮೇತ ಬಿದ್ದ ಪರಿಣಾಮ ರಸ್ತೆಯ ಮೇಲೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಜಯಪುರ ಪೊಲೀಸರು ಸ್ಥಳಕ್ಕೆ ಧಾವಿಸಿ ಮರವನ್ನು ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿ ಸಂಚಾರವನ್ನು ಪುನಃ ಆರಂಭಿಸುವಲ್ಲಿ ಸಹಕಾರ ನೀಡಿದ್ದಾರೆ.

ಇನ್ನು ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಭಾರೀ ಮಳೆಯ ಹಿನ್ನೆಲೆಯಲ್ಲಿ ಜನರು ಹಾಗೂ ಪ್ರವಾಸಿಗರು ತುರ್ತು ಅವಸ್ಥೆಗಳಿಗೆ ಸಿದ್ಧರಾಗಿರಬೇಕು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

 

 

Author:

...
Keerthana J

Copy Editor

prajashakthi tv

share
No Reviews