DAKSHINA KANNADA : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ನಿರಂತರ ಭಾರೀ ಮಳೆ ಆರ್ಭಟಿಸುತ್ತಿರುವ ಬೆನ್ನಲ್ಲೇ, ಕುಕ್ಕಾವು ಕೊಪ್ಪದ ಗಂಡಿ ಸಮೀಪ ಚಲಿಸುತ್ತಿದ್ದ ಸ್ಕೂಟರ್ ಮೇಲೆ ದೊಡ್ಡ ಮರ ಬಿದ್ದು ದಂಪತಿ ಗಾಯಗೊಂಡಿರುವ ಘಟನೆ ನಡೆದಿದೆ.
ಈ ದುರ್ಘಟನೆಗೆ ಒಳಗಾದವರು ಕಡಿರುದ್ಯವಾರ ಗ್ರಾಮದ ಎರ್ಮಾಲ ಪಲ್ಕೆ ನಿವಾಸಿಗಳಾದ ಗುಮ್ಮಣ್ಣ ಮತ್ತು ಅವರ ಪತ್ನಿ ವಿಮಲಾ. ಘಟನೆ ಸಂಭವಿಸಿದ ತಕ್ಷಣ ಸ್ಥಳೀಯರು ದೌಡಾಯಿಸಿ ಗಾಯಗೊಂಡ ದಂಪತಿಯನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.
ಸ್ಕೂಟರ್ ಮೇಲೆ ಬಿದ್ದ ಮರದ ಗಾತ್ರ ನೋಡಿ ಘಟನೆ ಎಷ್ಟು ಭಾರೀವಾಗಿತ್ತೆಂದು ಊಹಿಸಬಹುದಾಗಿದೆ. ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆಂಬುದು ಸಂತೋಷದ ವಿಷಯ. ಪ್ರಸ್ತುತ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಅತಿವೃಷ್ಟಿಯಿಂದಾಗಿ ಈ ರೀತಿಯ ಅನಾಹುತಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಹೆಚ್ಚಿನ ಎಚ್ಚರಿಕೆ ವಹಿಸ ಬೇಕಾಗಿದೆ.