ಬೆಂಗಳೂರು : ಬೆಂಗಳೂರು ನಗರದಲ್ಲಿ ರಸ್ತೆ ಸಂಚಾರವನ್ನು ಸುಗಮಗೊಳಿಸುವ ಉದ್ದೇಶದಿಂದ ಇಲಾಖೆ ಮತ್ತೊಮ್ಮೆ ಟೋಯಿಂಗ್ ವ್ಯವಸ್ಥೆಯನ್ನು ಪುನರ್ಆರಂಭಿಸಲಿದೆ. ಈ ಕುರಿತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರೇ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಇತ್ತೀಚೆಗೆ ನಗರದಲ್ಲಿ ಟೋಯಿಂಗ್ ಮತ್ತೆ ಆರಂಭವಾಗಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು, ಆದ್ರೆ ಇದೀಗ ಸರ್ಕಾರವೇ ಈ ವಿಷಯವನ್ನು ದೃಢಪಡಿಸಿದೆ. ಇನ್ನುಮುಂದೆ, ನಗರದಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ವಾಹನಗಳನ್ನು – ವಿಶೇಷವಾಗಿ ತಪ್ಪು ಪಾರ್ಕಿಂಗ್ ಮಾಡಿದ ವಾಹನಗಳನ್ನು – ಪೋಲಿಸ್ ಇಲಾಖೆ ನೇರವಾಗಿ ಟೋಯಿಂಗ್ ಮಾಡಲಿದೆ.
ರಸ್ತೆಯ ಬದಿಗಳಲ್ಲಿ ಹಾಗೂ "ಪಾರ್ಕಿಂಗ್ ಇಲ್ಲ" ಎಂಬ ಸೂಚನಾ ಫಲಕವಿರುವ ಜಾಗದಲ್ಲೋ ನಿಮ್ಮ ವಾಹನವನ್ನು ನಿಲ್ಲಿಸಿದ್ದರೆ, ಪೋಲಿಸ್ ಇಲಾಖೆ ತಮ್ಮದೇ ಆದ ಟೋಯಿಂಗ್ ವಾಹನಗಳ ಮೂಲಕ ನಿಮ್ಮ ವಾಹನವನ್ನು ಎತ್ತಿ ಸಂಚಾರ ಠಾಣೆಗೆ ಎತ್ತೊಯ್ಯಲಿದ್ದಾರೆ. ವಾಹನದ ಮಾಲೀಕರು ನಂತರ ಸಂಚಾರ ಠಾಣೆಗೆ ತೆರಳಿ ನಿಗದಿತ ದಂಡವನ್ನು ಪಾವತಿಸಿದ ಬಳಿಕವೇ ತಮ್ಮ ವಾಹನವನ್ನು ಬಿಡುಗಡೆ ಮಾಡಲಾಗುತ್ತದೆ.
ಸಾರಿಗೆ ನಿಯಮಗಳನ್ನು ಉಲ್ಲಂಘಿಸುವ ವಾಹನ ಚಾಲಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದ್ದು, ವಾಹನದ ಮಾಲೀಕರು ಎಚ್ಚರಿಕೆ ವಹಿಸಿ ಪಾರ್ಕಿಂಗ್ ನಿಯಮಗಳನ್ನು ಪಾಲಿಸಲು ಸಂಬಂಧಿತ ಇಲಾಖೆ ಮನವಿ ಮಾಡಿದೆ.