Tipatur : ತಹಶೀಲ್ದಾರರಿಗೆ ಕಾನೂನು ಗೊತ್ತಿಲ್ಲ | ದಲಿತ ಮುಖಂಡರ ಆಕ್ರೋಶ

TIPATUR : ತಿಪಟೂರು ತಹಶೀಲ್ದಾರ್‌ ಪವನ್‌ ಕುಮಾರ್‌ ಅವರಿಗೆ ಸರಿಯಾಗಿ ಕಂದಾಯ ಇಲಾಖೆಯ ಕಾನೂನುಗಳೇ ಗೊತ್ತಿಲ್ಲ. ಕಚೇರಿಯಲ್ಲಿ ಕೂತು ಗರ್ಭಗುಡಿಯ ಮೂರ್ತಿಯಾಗಿದ್ದಾರೆ. ತಾಲೂಕಿನಲ್ಲಿ ಸಮಸ್ಯೆಗಳ ಮಹಾಪೂರವೇ ಇದೆ. ಸಾರ್ವಜನಿಕರ ಸಮಸ್ಯೆಯನ್ನು ಪರಿಹಾರ ಮಾಡಬೇಕಾದ ದಂಡಾಧಿಕಾರಿಗಳು, ಸಾರ್ವಜನಿಕರನ್ನು ಕಚೇರಿಯಿಂದ ಕಚೇರಿಗೆ ಅಲೆದಾಡಿಸುತ್ತಿದ್ದಾರೆ ಎಂದು ತಿಪಟೂರಿನಲ್ಲಿ ದಲಿತಪರ ಮುಖಂಡರು ಸುದ್ದಿಗೋಷ್ಠಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಕಲ್ಪತರು ಗ್ರ್ಯಾಂಡ್ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ದಲಿತ ಮುಖಂಡ ಪೆದ್ದಿಹಳ್ಳಿ ನರಸಿಂಹಯ್ಯ ಮಾತನಾಡಿ, ತಿಪಟೂರು ತಹಶೀಲ್ದಾರ್ ಪವನ್ ಕುಮಾರ್ ರವರಿಗೆ ಕಂದಾಯ ಇಲಾಖೆಯ ಕಾನೂನಿನ ಅರಿವು ಕಡಿಮೆ, ರೈತರ ಜಮೀನುಗಳ ಸಮಸ್ಯೆ ಉಂಟಾದಾಗ ಪರಿಹಾರ ಮಾಡಬೇಕಾದ ತಹಶೀಲ್ದಾರ್, ಕಚೇರಿಯಿಂದ ಕಚೇರಿಗೆ ಅಲೆದಾಡುವಂತೆ ಮಾಡುತ್ತಿದ್ದಾರೆ. ಜಮೀನಿಗೆ ಸಂಬಂಧವಿರದವರಿಗೆ ಸಹಕರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೊನ್ನವಳ್ಳಿ ಹೋಬಳಿಯ ಕಲ್ಕೆರೆ ಸರ್ವೆ ನಂಬರ್‌ 70/4 ಮತ್ತು 70/5 ತಿಪಟೂರು ನಿವಾಸಿ ವಿಶ್ವನಾಥ್‌ ಎಂಬುವವರು 8 ಎಕರೆ ಜಮೀನು ಖರೀದಿ ಮಾಡಿ, ಸ್ವಾಧೀನ ಪಡಿಸಿಕೊಂಡಿದ್ದರು.  ಇತ್ತ ಫೆಡರಲ್‌ ಬ್ಯಾಂಕ್‌ನಿಂದ 10 ಲಕ್ಷ ಸಾಲವನ್ನು ಪಡೆದಿದ್ದರು. ಆದರೆ. ಕಲ್ಕೆರೆ ಗ್ರಾಮದ ಗಜೇಂದ್ರ ಸಿಂಗ್‌, ಗೋವಿಂದ ರಾಜ್‌ ಸಿಂಗ್‌, ಕುಬೇಂದ್ರ ಸಿಂಗ್‌, ರಾಜಣ್ಣ ಎಂಬುವವರು ಬಳಿ ಜಮೀನಿಗೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳಿಲ್ಲ. ಆದರೂ ಕೂಡ ಮಾಲೀಕ ವಿಶ್ವನಾಥ್‌ ಗೆ ಅನಗತ್ಯವಾಗಿ ಮಾತನಾಡಿ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಮುಖಂಡರು ಗಂಭೀರವಾಗಿ ಆರೋಪಿಸಿದ್ದಾರೆ.

ಇತ್ತ ತಹಶೀಲ್ದಾರ್‌ ಮತ್ತು ಡಿವೈಎಸ್‌ಪಿ ಇಬ್ಬರು ಕೂಡ ಮಾಲೀಕ ವಿಶ್ವನಾಥ್‌ ಅವರ ಸಮಸ್ಯೆಗೆ ಸ್ಪಂದಿಸುವ ಬದಲು, ಬೇರೆ ವ್ಯಕ್ತಿಗಳಿಗೆ ಬೆಂಬಲಿಸುತ್ತಿದ್ದಾರೆ. ಆ ಮೂಲಕ ನ್ಯಾಯ ಸಿಗಬೇಕಾದ ವ್ಯಕ್ತಿಯು ಇಂದು ಪರದಾಡುತ್ತಿದ್ದಾನೆ ಎಂದು ದಲಿತರು ಆರೋಪ ಮಾಡ್ತಿದ್ದಾರೆ.

ಇನ್ನು ಕಿಬ್ಬನಹಳ್ಳಿ ಹೋಬಳಿ ಹಟ್ನ ಗ್ರಾಮದ ಸರ್ವೆ ನಂಬರ್ 91ರಲ್ಲಿ ಪರಿಶಿಷ್ಟ ಸಮುದಾಯದ 4 ಜನರಿಗೆ ಬಗರ್ ಹುಕ್ಕುಂ ಭೂಮಿ ಮುಂಜೂರಾಗಿದ್ದು, ಖಾತೆ ಮಾಡಿಕೊಡುವಂತೆ ತಹಶೀಲ್ದಾರ್ ರವರಿಗೆ ಅರ್ಜಿ ಹಾಕಿದರು ಖಾತೆ ಮಾಡಿಕೊಟ್ಟಿಲ್ಲ, ಬಡವರು ಉಳುಮೆ ಮಾಡಿಕೊಂಡು ಜೀವನ ನಡೆಸುತ್ತಿದ್ದ ಭೂಮಿ ಎತ್ತಿನಹೊಳೆ ಯೋಜನೆಗೆ ಭೂಸ್ವಾಧೀನವಾಗಿದ್ದು, ಪರಿಹಾರದ ಹಣ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಮತ್ತೊಬ್ಬ ದಲಿತ ಮುಖಂಡ ಆರೋಪಿಸಿದರು. ಜೊತೆಗೆ ಈ ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ನೊಂದ ದಲಿತರಿಗೆ ನ್ಯಾಯ ಒದಗಿಸಿಕೊಡಬೇಕು. ಇಲ್ಲವಾದಲ್ಲಿ ಗಂಭೀರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ಮುಖಂಡರಾದ ಗಾಂಧಿನಗರ ಬಸವರಾಜು, ರಮೇಶ್‌, ಮಾರಣ್ಣ, ನಾಗರಾಜು, ವಿಶ್ವನಾಥ್‌, ಹೊನ್ನಪ್ಪ ಗ್ಯಾರಘಟ್ಟ, ಕೆ.ಕುಮಾರ್‌, ರಾಘವೇಂದ್ರ ಲಕ್ಕಿಹಳ್ಳಿ ತಿಮ್ಮಯ್ಯ ಮತ್ತಿತ್ತರರು ಹಾಜರಿದ್ದರು.

 

Author:

...
Sushmitha N

Copy Editor

prajashakthi tv

share
No Reviews